ಚಾಮರಾಜನಗರ: ತಾಲ್ಲೂಕಿನ ಬಾಗಳಿ ಗ್ರಾಮದ ಜಮೀನೊಂದರಲ್ಲಿ ಹುಲಿ ಪ್ರತ್ಯಕ್ಷಗೊಂಡಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಗ್ರಾಮದ ಪುಟ್ಟಯ್ಯ ಎಂಬವರು ಸೋಮವಾರ ಬೆಳಿಗ್ಗೆ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಹುಲಿಯೊಂದು ಅವರ ಬಳಿ ಬಂದಿದೆ. ಹುಲಿಯನ್ನು ಕಂಡ ಪುಟ್ಟಯ್ಯ ಗಾಬರಿಗೊಂಡು ಸ್ಥಳದಲ್ಲೇ ನಿಂತಿದ್ದಾರೆ. ಕೆಲ ಕ್ಷಣ ರೈತನನ್ನು ನೋಡಿದ ಹುಲಿ ಬಳಿಕ ಯಾವುದೇ ಹಾನಿ ಮಾಡದೆ ಸಮೀಪದ ಕಬ್ಬಿನ ಗದ್ದೆಯೊಳಗೆ ನುಗ್ಗಿದೆ.
ಬಳಿಕ ರೈತ ಪುಟ್ಟಯ್ಯ ಪಕ್ಕದಲ್ಲಿಯೇ ಇದ್ದ ಮರವನ್ನು ಏರಿ ತನ್ನ ಮೊಬೈಲ್ನಲ್ಲಿ ಹುಲಿ ಓಡುವ ವಿಡಿಯೋ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹುಲಿ ಹೆಜ್ಜೆ ಎಂದು ಖಚಿತಪಡಿಸಿದ್ದಾರೆ. ಬಳಿಕ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ.
ಹುಲಿ ಕಾಣಿಸಿಕೊಂಡಿರುವುದು ಗ್ರಾಮಸ್ಥರು ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ. ಕೂಡಲೇ ಅರಣ್ಯ ಇಲಾಖೆಯ ಅಽಕಾರಿಗಳು ಹುಲಿಯನ್ನು ಸೆರೆಹಿಡಿಯಬೇಕು ಎಂದು ಮುಖಂಡ ಬಾಗಳಿ ರೇವಣ್ಣ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.




