Mysore
34
scattered clouds

Social Media

ಸೋಮವಾರ, 27 ಏಪ್ರಿಲ 2026
Light
Dark

ಕಾವೇರಿ ನದಿಯಲ್ಲಿ ಬರೀ ಬಂಡೆಗಲ್ಲುಗಳ ದರ್ಶನ

ಭೇರ್ಯ ಮಹೇಶ್

ಬಿರುಬಿಸಿಲಿಗೆ ನದಿಯಲ್ಲಿ ಕಡಿಮೆಯಾದ ನೀರಿನ ಹರಿವು; ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಆತಂಕ 

ಕೆ.ಆರ್.ನಗರ: ಬಿರುಬಿಸಿಲಿನ ಝಳಕ್ಕೆ ಭತ್ತದ ನಾಡು ಕಾದ ಕಾವಲಿಯಂತಾಗಿದ್ದು, ಕಾವೇರಿ ನದಿಯಲ್ಲಿ ಬಂಡೆಗಲ್ಲುಗಳೇ ಕಾಣಿಸುತ್ತಿವೆ. ಕಾವೇರಿ ನದಿ ನಾಡಿನ ಜೀವನದಿಯಾಗಿದೆ. ಆದರೆ, ಮಳೆ ಕೊರತೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕ್ಷೀಣಿಸಿದೆ.

ಸಾಲಿಗ್ರಾಮ ತಾಲ್ಲೂಕಿನ ಕರ್ತಾಳು ಗ್ರಾಮದಿಂದ ಆರಂಭವಾಗಿ ಕೆ.ಆರ್. ಎಸ್. ಜಲಾಶಯದವರೆಗೆ ಕಾವೇರಿ ನದಿ ಕಾಲುವೆ ರೀತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದೆ. ಸಣ್ಣ ಸಣ್ಣ ಹಳ್ಳಗಳು ಬತ್ತಿರುವುದು ಕಾವೇರಿ ನದಿಯ ಹರಿವು ಕ್ಷೀಣಿಸಲು ಕಾರಣವಾಗಿದೆ. ಭತ್ತದ ನಾಡು ಕೆ.ಆರ್.ನಗರ ಮತ್ತು ಸಾಲಿ ಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಹರಿ ಯುವ ಜೀವನದಿ ಕಾವೇರಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಬರೀ ಕಲ್ಲುಬಂಡೆಗಳೇ ಕಾಣುತ್ತಿವೆ.

ಈಗಾಗಲೇ ಈ ಭಾಗದಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಅಲ್ಲದೆ ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿ ಸಂಕುಲಕ್ಕೆ ಜೀವಜಲ ದೊರಕದಿದ್ದರೆ ಹೇಗೆ? ಎಂಬ ಚಿಂತೆ ಎದುರಾಗಿದೆ. ಜಾನುವಾರುಗಳಿಗೆ ಮತ್ತು ಜನವಸತಿ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಸ್ಥಳಿಯ ಸಂಸ್ಥೆಗಳು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಮುಂದಿನ ಮೇ ತಿಂಗಳೊಳಗೆ ಮಳೆಯಾಗದಿದ್ದರೆ ಬರ ಮತ್ತು ಬೇಸಿಗೆಯನ್ನು ಹೇಗೆ ಎದುರಿಸಬೇಕೆಂಬುದು ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿದೆ.

ತಾಪಮಾನ ಏರಿಕೆ: ಮಳೆಯ ಅಭಾವ, ನೆತ್ತಿ ಸುಡುವ ಬಿಸಿಲಿನಿಂದ ಭತ್ತದ ನಾಡು ಬಳಲಿದೆ. ಜಾನುವಾರುಗಳು ನೀರು ಹಾಗೂ ಮೇವಿನ ಕೊರತೆ ಎದುರಿಸುತ್ತಿವೆ. ನ್ಯಾನೋ ಬಿಸಿಲಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೈನುಗಾರಿಕೆ ಮಾಡುವ ರೈತರು ಹಸಿರು ಮೇವುಗಾಗಿ ಪರದಾಡುತ್ತಿದ್ದಾರೆ. ಮೆಕ್ಕೆ ಜೋಳ ಟನ್‌ಗೆ ೩ ಸಾವಿರ ರೂ. ನಿಂದ ಮೂರೂವರೆ ಸಾವಿರ ರೂ. ದಾಟಿದೆ. ಕೆ. ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಕೆಲವು ಗ್ರಾಮಗಳಿಂದ ನೇರವಾಗಿ ಚರಂಡಿಯ ತ್ಯಾಜ್ಯ ನೀರು ಹರಿದು ಕಾವೇರಿ ನದಿಗೆ ಸೇರುತ್ತಿದೆ. ಇದೇ ರೀತಿ ಕೆ.ಆರ್.ನಗರದ ತ್ಯಾಜ್ಯ ನೀರು ಕಾಲುವೆ ಮೂಲಕ ಸೇರುತ್ತಿದ್ದು, ನದಿ ಕಲುಷಿತಗೊಳ್ಳುವ ಆತಂಕ ಎದುರಾಗಿದೆ.

” ಬಿಸಿಲಿನ ಬೇಗೆ ಹೆಚ್ಚಾಗಿದೆ. ಆದಷ್ಟು ಮನೆಯಿಂದ ಹೊರಗೆ ಬರುವುದನ್ನು ಜನರು ಕಡಿಮೆ ಮಾಡಬೇಕು. ಹೊರಗೆ ಹೋಗುವಾಗ ಜೊತೆಯಲ್ಲಿ ಛತ್ರಿ, ಕುಡಿಯುವ ನೀರಿನ ಬಾಟಲ್ ಇರಲಿ, ತಲೆಗೆ ಟೋಪಿ ಧರಿಸಿಕೊಂಡು ಹೋಗ ಬೇಕು. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ತಣ್ಣೀರಿನ ಸ್ನಾನ ಮಾಡಬೇಕು, ತೆಳ್ಳಗಿನ ಬಟ್ಟೆ ಧರಿಸಬೇಕು. ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಬಾರದು. ಮಲುಗುವಾಗ ಸೀಲಿಂಗ್ ಫ್ಯಾನ್ ಉಪಯೋಗಿಸಬೇಕು.”

-ಡಾ.ನಟರಾಜ್, ಎದೆರೋಗ ತಜ್ಞರು

 

 

Tags:
error: Content is protected !!