Mysore
26
broken clouds

Social Media

ಬುಧವಾರ, 29 ಏಪ್ರಿಲ 2026
Light
Dark

ಕರಿಯಮ್ಮ ದೊಡ್ಡಮ್ಮ ದೇವಿ ಜಾತ್ರೋತ್ಸವಕ್ಕೆ ಭೇರ್ಯ ಸಜ್ಜು

ಭೇರ್ಯ ಮಹೇಶ್

ಇಂದು ಭೇರ್ಯದಲ್ಲಿ ಕರಿಯಮ್ಮ ದೊಡ್ಡಮ್ಮ ದೇವಿ ಸಿಡಿ ಉತ್ಸವ, ನಾಳೆ ಜಾತ್ರಾ ಮಹೋತ್ಸವ 

ಭೇರ್ಯ: ಭೇರ್ಯ ಗ್ರಾಮದ ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಿಯ ಸಿಡಿ ಮಹೋತ್ಸವವು ಏಪ್ರಿಲ್ ೭ರ ಮಂಗಳವಾರ ಮತ್ತು ಏ.೮ರ ಬುಧವಾರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಶ್ರೀ ಕರಿಯಮ್ಮ ದೊಡ್ಡಮ್ಮ ಟ್ರಸ್ಟ್ ವತಿಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಗ್ರಾಮದೇವತೆ ಶ್ರೀ ಕರಿಯಮ್ಮ ದೊಡ್ಡಮ್ಮ ಸಿಡಿಗೆ ಮಂಗಳವಾರ ಸಂಜೆ ಸಂಪ್ರದಾಯದಂತೆ ಬಾಳೆಗೊನೆ ಕಟ್ಟಿ ಅಲಂಕಾರ ಮಾಡಿ, ರಾತ್ರಿ ವೇಳೆ ಸಾವಿರಾರು ಜನರ ಸಮ್ಮುಖದಲ್ಲಿ ಕೊಂಬು, ಕಹಳೆ, ಕೀಲು ಕುದುರೆ ಮತ್ತು ಡೊಳ್ಳು, ನಗಾರಿ ಮಂಗಳವಾದ್ಯದೊಂದಿಗೆ ಸುಮಾರು ಒಂದು ಕಿ.ಮೀ. ದೂರ ಎಳೆದು ತಂದು ನಂತರ ಶ್ರೀ ಕರಿಯಮ್ಮ ದೊಡ್ಡಮ್ಮ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಜನರು ತಮ್ಮ ಹರಕೆ, ಕಾಣಿಕೆ, ಮುಡುಪು ಗಳನ್ನು ಸಲ್ಲಿಸುತ್ತಾರೆ.

ಬಾಯಿ ಬೀಗ: ವಿವಿಧ ಕಾರಣಗಳಿಗೆ ಹರಕೆ ಹೊತ್ತವರು ಸಿಡಿ ಎಳೆಯುವಾಗ ಬೆಳಿಗ್ಗೆಯಿಂದಲೇ ಉಪವಾಸವಿದ್ದು, ಬಾಯಿಗೆ ಬೀಗ ಹಾಕಿಕೊಂಡು ನಡೆಯುತ್ತಾರೆ. ಮಂಗಳವಾರ ರಾತ್ರಿ ಸಿಡಿ ಎಳೆಯುವಾಗ ಮುತ್ತೈದೆಯರು ತಂಬಿಟ್ಟಿನ ಆರತಿ ಬೆಳಗುತ್ತಾರೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಿಡಿ ಮತ್ತು ಜಾತ್ರಾ ಮಹೋತ್ಸವ ಬಹಳ ದೊಡ್ಡ ಹಬ್ಬವಾಗಿದೆ.

ವಿದ್ಯುತ್ ದೀಪಾಲಂಕಾರ: ಈಗಾಗಲೇ ಮೂರು ದಿನಗಳಿಂದ ಗ್ರಾಮದ ಹಾಸನ- ಮೈಸೂರು ರಸ್ತೆ, ಸಾಲಿಗ್ರಾಮ- ಕೆ.ಆರ್.ಪೇಟೆ ರಸ್ತೆಯ ಉದ್ದಕ್ಕೂ ಎಲ್‌ಇಡಿ ಬಲ್ಬ್‌ಗಳಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಇಡೀ ಭೇರ್ಯ ಗ್ರಾಮವೇ ಜಗಜಗಿಸುತ್ತಿದೆ.

ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು, ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ಹೊರರಾಜ್ಯದಿಂದ ಜನರು ಬಂದು ದೇವಿಗೆ ಹರಕೆ ಕಾಣಿಕೆ ಒಪ್ಪಿಸಿ ಹೋಗುತ್ತಾರೆ. ಜೊತೆಗೆ ಇಲ್ಲಿಯೇ ಹರಕೆ ಒಪ್ಪಿಸಿ ಪರ ಮಾಡಿ ನಾಲ್ಕಾರು ಜನರಿಗೆ ದಾಸೋಹ ಮಾಡುವುದು ಈ ದೇವಸ್ಥಾನದ ಸಂಪ್ರದಾಯವಾಗಿದೆ.

ಗ್ರಾಮವು ಮಂಗಳವಾರ ಮತ್ತು ಬುಧವಾರ ಮಧುವಣಿಗಿತ್ತಿಯಂತೆ ತಳಿರು-ತೋರಣಗಳಿಂದ ಅಲಂಕೃತಗೊಂಡು ಹಾಗೂ ವಿದ್ಯುತ್ ದೀಪಾಲಂಕಾರದಿಂದ ನೋಡುಗರ ಕಣ್ಮನ ಸೆಳೆಯುತಿದೆ. ಎಲ್ಲಾ ಜಾತಿ ಜನಾಂಗದವರು ಒಟ್ಟಾಗಿ ಸೇರಿ ಆಚರಿಸುವ ಜಾತ್ರಾ ಮಹೋತ್ಸವ ಇದಾಗಿದೆ.

ಪೌರಾಣಿಕ ನಾಟಕ: ಜಾತ್ರಾ ಮಹೋತ್ಸವ ದಿನವಾದ ಬುಧವಾರ ರಾತ್ರಿ ೯ ಗಂಟೆಗೆ ಶ್ರೀ ದೊಡ್ಡಮ್ಮ ಕರಿಯಮ್ಮ ಕೃಪಾಪೋಷಿತ ನಾಟಕ ಮಂಡಳಿಯ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದ್ದು, ಗ್ರಾಮಸ್ಥರ ಮನರಂಜಿಸಲಿದೆ.

” ನಮ್ಮ ಪೂರ್ವಿಕರ ಕಾಲದಿಂದಲೂ ಶ್ರೀ ಕರಿಯಮ್ಮ ಸಿಡಿ ಮತ್ತು ದೊಡ್ಡಮ್ಮ ಜಾತ್ರಾ ಮಹೋತ್ಸವವನ್ನು ಜಾತಿ-ಭೇದವಿಲ್ಲದೆ ಎಲ್ಲಾ ಜನಾಂಗದವರು ಒಗ್ಗೂಡಿ ಸಿಡಿ ಎಳೆಯುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ದೇವಿಯ ಮಹಿಮೆಯನ್ನು ಮೆಚ್ಚಿ ಸಾವಿರಾರು ಭಕ್ತಾದಿಗಳು ಕಾಣಿಕೆ, ಹರಕೆ, ಮುಡುಪು, ಸಲ್ಲಿಸಲು ಆಗುಮಿಸುತ್ತಾರೆ. ಎರಡು ದಿನಗಳವರೆಗೆ ನಡೆಯುವ ಗ್ರಾಮ ದೇವತೆಯ ಜಾತ್ರೆಗೆ ವಿಶೇಷ ಮೆರುಗು ನೀಡಲಾಗುತ್ತಿದೆ.”

-ನಾಡಗೌಡ ಕುಮಾರಸ್ವಾಮಿ, ಅಧ್ಯಕ್ಷ, ಶ್ರೀಕರಿಯಮ್ಮ ದೊಡ್ಡಮ್ಮ ಟ್ರಸ್ಟ್ ಸಮಿತಿ

 

 

Tags:
error: Content is protected !!