ಮಂಜು ಕೋಟೆ
ಕೋಟೆ: ೧೦ ವರ್ಷಗಳಿಂದ ಬಳಕೆಗೆ ಬಾರದ ಕಟ್ಟಡ; ಮತ್ತೊಂದು ಕಾಮಗಾರಿಯೂ ನನೆಗುದಿಗೆ
ಎಚ್.ಡಿ.ಕೋಟೆ: ಪಟ್ಟಣದ ಹೃದಯ ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಾಬು ಜಗಜೀವನ್ ರಾಂ ಸಮುದಾಯ ಭವನ ಪಾಳುಬಿದ್ದು ಪುಂಡ- ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸರ್ಕಾರ ಮತ್ತು ಜನಪ್ರತಿನಿಧಿಗಳು ಮಹಾನಾಯಕರ ಹೆಸರುಗಳಲ್ಲಿ ತಾಲ್ಲೂಕು ಕೇಂದ್ರ ಸ್ಥಾನಗಳಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಭವನ ನಿರ್ಮಾಣ ಮಾಡಿ ಮಹನೀಯರಿಗೆ ಗೌರವ ಸಲ್ಲಿಸುತ್ತಾರೆ. ಅದರಂತೆ ೨೦೦೫ರಲ್ಲಿ ಶಾಸಕರಾಗಿದ್ದ ಎಂ.ಪಿ.ವೆಂಕಟೇಶ್ ಪಟ್ಟಣದ ಹೃದಯ ಭಾಗವಾದ ಬಾಪೂಜಿ ವೃತ್ತದ ಬಳಿ ಮಾದಿಗ ಸಮುದಾಯ ದವರಿಗಾಗಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣ ಮಾಡಲು ನಿವೇಶನವನ್ನು ಮಂಜೂರು ಮಾಡಿದ್ದರು. ನಿವೇ ಶನವನ್ನು ಪಡೆಯಲು ಸಮಾಜದ ಅಧ್ಯಕ್ಷರಾಗಿದ್ದ ಪರಶಿವಮೂರ್ತಿ, ಮತ್ತಿತರ ಮುಖಂಡರು ಜಿಲ್ಲಾಧಿಕಾರಿಯಾಗಿದ್ದ ಮಣಿವಣ್ಣನ್ ಅವರ ಮೂಲಕ ಸರ್ಕಾರಕ್ಕೆ ಹಣ ಪಾವತಿಸಿ ನಿವೇಶನ ಪಡೆದಿದ್ದರು. ನಂತರ ೧ ಕೋಟಿ ರೂ. ವೆಚ್ಚದಲ್ಲಿ ೨೦೧೦ರಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ದೊರೆತು, ೨೦೧೫ರಲ್ಲಿ ಪೂರ್ಣಗೊಂಡಿತ್ತು. ಆದರೆ, ಕಳೆದ ಹತ್ತು ವರ್ಷಗಳಿಂದ ಮಹಾ ನಾಯಕರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಈ ಭವನ ಸಾರ್ವಜನಿಕರ ಉಪಯೋಗಕ್ಕೂ ಬಾರದೆ ಮತ್ತು ಅಲ್ಲಿರುವ ವಾಣಿಜ್ಯ ಮಳಿಗೆಯೂ ಕೂಡ ಗ್ರಾಹಕರ ಉಪಯೋಗಕ್ಕೂ ಬರದೆ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಸಮುದಾಯದವರು ಮತ್ತು ಅಧಿಕಾರಿ ವರ್ಗದವರ ಮುಸುಕಿನ ಗುದ್ದಾಟದಲ್ಲಿ ಕೆಲವು ಗೊಂದಲಗಳು ಉಂಟಾಗಿ, ಭವನ ದಿನದಿಂದ ದಿನಕ್ಕೆ ಪಾಳು ಬೀಳುತ್ತಿದೆ. ಜೊತೆಗೆ ಭವನದ ಪಕ್ಕದಲ್ಲಿ ಮತ್ತೊಂದು ಕಾಮಗಾರಿ ನಡೆಸಲು ಸುಮಾರು ೨ ಕೋಟಿ ರೂ.ಗಳನ್ನು ಶಾಸಕ ಅನಿಲ್ ಚಿಕ್ಕಮಾದು ಹಲವು ತಿಂಗಳ ಹಿಂದೆ ಲ್ಯಾಂಡ್ ಆರ್ಮಿಯವರಿಗೆ ನೀಡಿ, ಮುಂಗಡವಾಗಿ ೬೬ ಲಕ್ಷ ರೂ. ಬಿಡುಗಡೆಗೊಳಿಸಿದ್ದರು. ಆದರೆ, ಈ ಕಾಮಗಾರಿಯೂ ಪ್ರಾರಂಭಗೊಳ್ಳದೆ ನನೆಗುದಿಗೆ ಬಿದ್ದಿದೆ.
ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಮಾದಿಗ ಸಮುದಾಯದ ಪ್ರಮುಖ ಮುಖಂಡರು ಗುರುತಿ ಸಿಕೊಂಡಿದ್ದು, ಅವರ ಸಮುದಾಯದ ಮಹಾನ್ ನಾಯಕರ ಹೆಸರಿನಲ್ಲಿ ಇರುವ ಭವನಕ್ಕೆ ಇಂತಹ ಸ್ಥಿತಿ ಬಾರದಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ, ಅವರು ಆ ಕೆಲಸ ಮಾಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಈಗಲಾ ದರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿದಾಗ ಮಾತ್ರ ಬಾಬು ಜಗಜೀವನ್ ರಾಂರವರ ಹೆಸರಿನಲ್ಲಿ ನಿರ್ಮಾಣ ಗೊಂಡಿರುವ ಭವನ ಜನರ ಸೇವೆಗೆ ದೊರೆತು ಕಟ್ಟಡ ನಿರ್ಮಿಸಿದ್ದಕ್ಕೂ ಸಾರ್ಥಕತೆ ಸಿಗಲಿದೆ.
ಸರ್ಕಾರ-ಸಂಘ ಮುಸುಕಿನ ಗುದ್ದಾಟ: ಸಮುದಾಯ ಭವನವನ್ನು ಸರ್ಕಾರ ಇನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿಲ್ಲ. ಇತ್ತ ಬಾಬು ಜಗಜೀವನ ರಾಂ ಸಂಘದವರು ಕಟ್ಟಡ ತಮ್ಮ ವ್ಯಾಪ್ತಿಯ ನಿರ್ವಹಣೆಗೆ ಬರಬೇಕು ಎನ್ನುತ್ತಿರುವುದರಿಂದ ಕಟ್ಟಡ ಅನಾಥವಾಗಿದೆ ಎಂದು ಹೇಳಲಾಗಿದೆ.
” ಭವನ ಹಲವು ವರ್ಷಗಳಿಂದ ಪಾಳುಬಿದ್ದಿದ್ದು, ಇಲಾಖೆ ವ್ಯಾಪ್ತಿಗೆ ಅಥವಾ ಬಾಬು ಜಗಜೀವನ್ ರಾಂ ಸಂಘದ ವ್ಯಾಪ್ತಿಗೆ ಭವನದ ನಿರ್ವಹಣೆ ಮಾಡುವ ವಿಚಾರವಾಗಿ ಮೇಲಧಿಕಾರಿಗಳ ಮೂಲಕ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ೨ ಕೋಟಿ ರೂ. ವೆಚ್ಚದ ಮುಂದುವರಿದ ಕಾಮಗಾರಿ ಸಂಬಂಧ ೬೬ ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಲ್ಯಾಂಡ್ ಆರ್ಮಿಯವರು ಕಾಮಗಾರಿ ಪ್ರಾರಂಭಿಸಲಿದ್ದಾರೆ.”
-ರಮೇಶ್, ತಾಲ್ಲೂಕು ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ





