Mysore
17
scattered clouds

Social Media

ಭಾನುವಾರ, 11 ಜನವರಿ 2026
Light
Dark

ಬಹೂರೂಪಿ | ಜಾನಪದ ಉತ್ಸವಕ್ಕೆ ಚಾಲನೆ

ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ ನಡೆಯುತ್ತಿರುವ 25 ನೇ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮೆರುಗೊಳಿಸಿತು.

ನಗರದ ಕಲಾಮಂದಿರ ಕಿಂದರಿಜೋಗಿ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೌದ್ಧ ಬಿಕ್ಕುಗಳ ವೇಷಧಾರಿಗಳು ದೀಪ ಹಿಡಿದು ವೇದಿಕೆ ಮೇಲೆ ಆಗಮಿಸಿದರು. ಮಣಿಪುರಿ ಸಂಗೀತ ವಾದ್ಯಾವಾದ ಶಯಾಶ್ ನುಡಿಸುವ ಮೂಲಕ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಜಾನಪದ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಬಹುರೂಪಿಗೆ ಅಟಿಗಲ್ಲು ಹಾಕಲಾಯಿತು. ಉದ್ಘಾಟನಾ ಉದ್ಘಾಟನ ನುಡಿಗಳನ್ನಾಡಿದ ಅವರು, ಸಮಾಜದಲ್ಲಿ ನೆಮ್ಮದಿ, ಸಮಾನತೆ ಬದುಕು ನಡೆಸಲು ರಂಗಚಟುವಟಿಕೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಲ್ಲಿ ಈ ಬಾರಿಯ ಬಹುರೂಪಿ ನಡೆಯುತ್ತಿರುವುದು ನಿಜಕ್ಕೂ ಖುಷಿಯ ವಿಚಾರ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಸ್ವಾತಂತ್ರ್ಯದ ಪೂರ್ವದಲ್ಲಿ ಸಮಾಜದಲ್ಲಿ ಸಮಾನತೆ ಇರಲಿಲ್ಲ. ಜಾತಿ, ವರ್ಣದ ಹೆಸರಿನಲ್ಲಿ ತಾರತಮ್ಯ ನಡೆಸಲಾಗುತ್ತಿತ್ತು. ದಿನಕೂಲಿಗಳು, ಕೆಳವರ್ಗದವರು, ಕರಕುಶಲಕರ್ಮಿಗಳ ಬದುಕು ಶೋಚನೀಯವಾಗಿತ್ತು. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ರಚನೆ ಮಾಡಿದಾಗ ಸರ್ವರಿಗೂ ಸಮಾನತೆ ಬದುಕು ದೊರೆಯಿತು. ಸೌದಾರ್ಹತೆಯಿಂದ ಬೆರೆತು ಹಕ್ಕುಗಳನ್ನು ಪ್ರತಿಯೊಬ್ಬರು ಪಡೆಯುವಂತಾಯಿತು. ಭಾರತದ ಸಂವಿಧಾನ ಕಾನೂನು ಗ್ರಂಥವಾಗಿ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ ಎಂದು ಹೇಳಿದರು.

ಸಿನಿಮಾದಲ್ಲಿ ಶೇ.70ರಷ್ಟು ಕಮರ್ಶಿಯಲ್ ಅಂಶ ಇರುತ್ತದೆ. ಆದರೆ, ರಂಗಭೂಮಿ ಕೇವಲ ಮನರಂಜನೆಯ ಭಾಗವಲ್ಲ. ಅದರಲ್ಲಿ ಸಾಮಾಜಿಕ ಬದ್ಧತೆ ಅಡಗಿದೆ. ಜಾನಪದ ತಾಯಿ ಬೇರು. ಈ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರಿಗೆ ಅವಕಾಶ ನೀಡಿರುವುದು ಖುಷಿಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಅಪರ ಜಿಲ್ಲಾಕಾರಿ ಡಾ. ಪಿ. ಶಿವರಾಜ್ ಮಾತನಾಡಿ, ಪ್ರತಿವರ್ಷ ವಿನೂತನ ಆಶಯದಲ್ಲಿ ಬಹುರೂಪಿ ನಡೆಯುತ್ತಿದೆ. ಈ ಬಾರಿ ಅಂಬೇಡ್ಕರ್ ಆಶಯದಲ್ಲಿ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ. ಜಗತ್ತು ಅಂಬೇಡ್ಕರ್ ಅವರ ಹೆಸರನ್ನು ಎಂದೂ ಮರೆಯುವುದಿಲ್ಲ ಎಂದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅಧ್ಯಕ್ಷತೆ ವಹಿಸಿದ್ದರು. ರಂಗಭೂಮಿ ಕಲಾವಿದೆ ಡಾ.ಗೀತಾ ಸಿದ್ಧಿ, ರಂಗಸಮಾಜದ ಸದಸ್ಯ ಶಶಿಧರ್ ಭಾರಿಘಾಟ್, ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಸಂಚಾಲಕಿ ಗೀತಾ ಮೋಂಟಡ್ಕ ಸೇರಿದಂತೆ ಇತರರು ಹಾಜರಿದ್ದರು.

ಜನಪದ ಉತ್ಸವದ ಸಂಭ್ರಮ

ಜನಪದ ಉತ್ಸವದಲ್ಲಿ ರಂಗಾಸಕ್ತರ ಸಂಭ್ರಮದೊಂದಿಗೆ ಜನಪದ ಕಲೆಯೂ ಮೇಳೈಸಿತು. ಇದೇ ವೇಳೆ ಮೈಸೂರಿನ ಅರುಣೋಧಯ ತಂಡದ ವಿಶೇಷಚೇತನ ಮಕ್ಕಳ ಕಂಸಾಳೆ ಪ್ರದರ್ಶನ ಗಮನ ಸೆಳೆಯಿತು. ಬಾಗಲಕೋಟೆಯ ಬಯಲಾಟ ‘ಕೃಷ್ಣಾರ್ಜುನ ಕಾಳಗ’ ಜನಮನಸೂರೆಗೊಳಿಸಿತು. ಪಿರಿಯಾಪಟ್ಟಣದ ಅರೇಹಳ್ಳಿ ಗ್ರಾಮದ ತಂಡದವರು ನಡೆಸಿಕೊಟ್ಟ ವಾದ್ಯಸಂಗೀತ ವಿಶೇಷವಾಗಿತ್ತು. ಜಾನಪದ ಕಲಾ ತಂಡಗಳು, ವೇಶಧಾರಿಗಳಾಗಿ, ಕಂಸಾಳೆ ಹಿಡಿದು ಮಾದಪ್ಪನ ಹಾಡಿಗೆ ಹೆಚ್ಚಿ ಹಾಕಿದರು. ವಾರಾಂತ್ಯವಾದ ಭಾನುವಾರ ಸಾಕಷ್ಟು ರಂಗಾಸಕ್ತರು, ಹಿರಿಯರು, ಯುವಮನಸ್ಸುಗಳು ತಮ್ಮ ಸ್ನೇಹಿತರು ಮತ್ತು ಹಿತೈಷಿಗಳ ಜತೆಗೂಡಿ ರಂಗಾಯಣ ಅಂಗಳದಲ್ಲಿ ಜಮಾಯಿಸಿ ಜನಪದ ‘ರಸ’ ಸವಿದರು.

Tags:
error: Content is protected !!