Mysore
22
mist

Social Media

ಶನಿವಾರ, 27 ಡಿಸೆಂಬರ್ 2025
Light
Dark

ಅಧಿಕಾರ ಹಂಚಿಕೆ ದೊಂಬರಾಟದಂತಿದೆ : ಎಚ್.ಡಿ.ದೇವೇಗೌಡ ಟೀಕೆ

ಬೆಂಗಳೂರು : ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೈಡ್ರಾಮ ಆಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಈ ಹಿಂದೆ ಗ್ರಾಮೀಣ ಭಾಗದಲ್ಲಿ ದೊಂಬರಾಟ ಆಡುತ್ತಿದ್ದರು. ಅದು ನೆನಪಿಸುವಂತಿದೆ ಎಂದು ಆರೋಪಿಸಿದರು.

ಉಪಮುಖ್ಯಮಂತ್ರಿ ಡಿಕೆಶಿಯವರು ಮಾಡುತ್ತಿರುವಷ್ಟು ದೇವರ ಪೂಜೆಯನ್ನು ನಾನೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ:-ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ರಿಷಬ್‌ ಶೆಟ್ಟಿ ಕುಟುಂಬ

ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‍ಗಾಂಧಿಯವರಿಗೆ ವೋಟ್ ಚೋರಿ ವಿಚಾರ ಮಾತ್ರ ಗೊತ್ತು. ಆದರೆ ಕರ್ನಾಟಕದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ತೆಲಂಗಾಣಕ್ಕೆ ಹೋಗಿದ್ದೂ ಸೇರಿದಂತೆ ಬೇರೆಬೇರೆ ವಿಚಾರಗಳ ಬಗ್ಗೆ ಅರಿವೇ ಇಲ್ಲ ಎಂದು ಟೀಕಿಸಿದರು.

ನರೇಗಾ ಹೆಸರು ಬದಲಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಗೌಡರು, ಕಾಂಗ್ರೆಸ್ ನವರಿಗೆ ಮಹಾತ್ಮ ಗಾಂಧಿಯವರ ಬಗ್ಗೆ ಎಲ್ಲಿಲ್ಲದ ಪ್ರೀತಿ ಅಭಿಮಾನ ಈಗ ಹೃದಯದಿಂದ ಬಂದಿದೆ. ಈ ಹಿಂದೆ ದೇಶದ ಪ್ರಧಾನಿಯಾಗಿದ್ದ ಪಂಡಿತ್ ಜವಹರಲಾಲ್ ನೆಹರೂ, ಇಂದಿರಾಗಾಂಧಿಯವರ ಕಾಲದಲ್ಲಿ ಅವರು ಗಾಂಧಿ ಫೋಟೊಗಳನ್ನೇ ಬಳಸುತ್ತಿರಲಿಲ್ಲ. ಒಂದು ವೇಳೆ ಅವರು ಪ್ರಚಾರದ ಸಂದರ್ಭದಲ್ಲಿ ಗಾಂಧೀಜಿ ಫೋಟೊ ಬಳಸಿರುವುದನ್ನು ಸಾಬೀತುಪಡಿಸಿದರೆ ನಾನು ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದರು.

Tags:
error: Content is protected !!