ಮೈಸೂರು : ಸಂವಿಧಾನದ ಮಹತ್ವ, ದೇಶದ ಯೋಧರ ಕೆಚ್ಚೆದೆಯ ಹೋರಾಟ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕನ್ನಡ ವೈಭವಕ್ಕೆ ಸಾಕ್ಷಿಯಾಗಿದ್ದು ದಸರಾ ಮಹೋತ್ಸವದ ಆಕರ್ಷಣಿಯ ಕೇಂದ್ರವಾದ ಯುವ ಸಂಭ್ರಮ. ಇವೆಲ್ಲವೂ ಮೂರನೇ ದಿನದ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯದಲ್ಲಿ ಅನಾವರಣ ಗೊಂಡವು.
ದಸರಾ ಮಹೋತ್ಸವದ ಅಂಗವಾಗಿ ನಗರದ ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ಹಬ್ಬ ಯುವ ಜನತೆಯಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನದೊಂದಿಗೆ ದೇಶ ಭಕ್ತಿಯ ಕಿಚ್ಚನ್ನು ಹಚ್ಚುವಂತೆ ಮಾಡಿತು.
ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯ ಸ್ಮರಣೆ, ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆಯ ಜಪ, ಭಾರತೀಯ ಯೋಧರ ಸ್ಮರಣೆಯೊಂದಿಗೆ ಜೈ ಜವಾನ್, ಜೈ ಕಿಸಾನ್ ಘೋಷಣೆಗಳು ಮೊಳಗಿದವು. ಬೆಂಗಳೂರು ಕೆಂಗೇರಿ ಸರ್ಕಾರಿ ಪ್ರಥಮ ದರ್ಜೆ ಪರಿಸರ ಸಂರಕ್ಷಣೆ ಎಂಬ ನೃತ್ಯಕ್ಕೆ ಹೆಜ್ಜೆ ಹಾಕಿದರು, ಮೈಸೂರು ಹಿನಕಲ್ ಮೈಸೂರು ರೂರಲ್ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಮೈಸೂರು ರಾಜರ ಕೊಡುಗೆಯ ಬಗ್ಗೆ ತಿಳಿಸಿದರು, ಹುಣಸೂರು ಟ್ಯಾಲೆಂಟ್ ಎಜುಕೇಶನ್ ಟ್ರಸ್ಟ್ ವತಿಯಿಂದ ಪೌರಾಣಿಕ ನೃತ್ಯ ಎಲ್ಲರೂ ಗಮನ ಸೆಳೆದರೆ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿಗಳು ಭಾರತೀಯ ಸಾಂಸ್ಕೃತಿಕ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ 59 ನೃತ್ಯ ಪ್ರದರ್ಶನಗಳನ್ನು ಮಾಡಲಾಯಿತು. ಅಯೋಧ್ಯ ಶ್ರೀರಾಮ ಶಿಲ್ಪಿ ಮೈಸೂರಿನ ಹೆಮ್ಮೆಯ ಅರುಣ್ ಯೋಗಿರಾಜ್, ಮೈಸೂರು ದಸರಾ ವೈಭವ ಅಂದು ಇಂದು, ದೇಶ ಕಾಯುವ ಯೋಧನ ಬಗ್ಗೆ, ಸರ್ಕಾರದ ಗ್ಯಾರಂಟಿ ಯೋಜನೆಗಳು ಹೀಗೆ ನಾನಾ ಕಾಲೇಜು ತಂಡಗಳು ಕನ್ನಡ ನಾಡು ನುಡಿ ಯೊಂದಿಗೆ ಕರ್ನಾಟಕದ ಜಾನಪದ ವೈವಿಧ್ಯತೆ ಮತ್ತು ಪರಂಪರೆಯನ್ನು ಬಿಂಬಿಸುವ ನೃತ್ಯಗಳನ್ನು ಮಾಡುವ ಮೂಲಕ ಗಮನ ಸೆಳೆದವು.





