ಮಂಡ್ಯ : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ ಪತಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ತಾಲ್ಲೂಕಿನ ಯಲಿಯೂರು ವೃತ್ತದ ಬಳಿ ವಾಸವಾಗಿದ್ದ ರಾಮಚಂದ್ರ ಎಂಬವರು ಶಿಕ್ಷೆಗೊಳಗಾದ ಆರೋಪಿಯಾಗಿದ್ದು, ಈತನ ಪತ್ನಿ ಮನುಜ ಎಂಬವರನ್ನು ಚಾಕುವಿನಿಂದ ಇರಿದು, ಕತ್ತು ಕೊಯ್ದು ಹತ್ಯೆಗೈದಿದ್ದನು.
ಘಟನೆ ವಿವರ
ಆರೋಪಿ ರಾಮಚಂದ್ರ ಯಲಿಯೂರು ಸರ್ಕಲ್ನಲ್ಲಿರುವ ತನ್ನ ಮನೆಯ ಬಳಿ ಕೋಳಿ ಫಾರಂ ಇಟ್ಟುಕೊಂಡು ಪತ್ನಿ ಮನುಜ ಹಾಗೂ ಮಗನೊಂದಿಗೆ ವಾಸವಾಗಿದ್ದನು. ಈತ ಪತ್ನಿ ಬೇರೊಬ್ಬನನ್ನು ಪ್ರೀತಿಸಿ ಆತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ವಿಚಾರ ತಿಳಿದ ರಾಮಚಂದ್ರ ಪತ್ನಿಗೆ ಹಲವು ಬಾರಿ ತಿಳಿವಳಿಕೆ ಹೇಳಿದ್ದ. ಆದರೂ ಆಕೆ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು. ಇದರಿಂದ ಕೋಪಗೊಂಡ ರಾಮಚಂದ್ರ 2023ರ ಮೇ 4 ರಂದು ಆಕೆಯೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿ ಆಕೆಯ ಕುತ್ತಿಗೆ ಕೊಯ್ದು ಧಾರುಣವಾಗಿ ಹತ್ಯೆಗೈದಿದ್ದನು.
ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ಸ್ಪೆಕ್ಟರ್ ಎಚ್.ಆರ್.ಸಿದ್ದಪ್ಪ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶರಾದ ಸಯ್ಯುದುನಿಶಾ ಅವರು ವಿಚಾರಣೆ ನಡೆಸಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ಮತ್ತು 52 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರವಾಗಿ ಎನ್.ಬಿ.ವಿಜಯಲಕ್ಷಿ ಅವರು ವಾದ ಮಂಡಿಸಿದ್ದರು.




