Mysore
22
overcast clouds

Social Media

ಶನಿವಾರ, 28 ಫೆಬ್ರವರಿ 2026
Light
Dark

ಓದುಗರ ಪತ್ರ: ರೈಲಿನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿ

ಓದುಗರ ಪತ್ರ

ತಾಳಗುಪ್ಪದಿಂದ ಶಿವಮೊಗ್ಗ ಮಾರ್ಗವಾಗಿ ಮೈಸೂರಿಗೆ ಬರುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ (೧೬೨೦೫) ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರು ಪರದಾಡಿದರು. ಈ ರೈಲಿನಲ್ಲಿ ಎದುರಾದ ಅವ್ಯವಸ್ಥೆ ಕಂಡು ಬೇಸರವಾಯಿತು. ಹಳೆಯ ಕಾಲದ ಬೋಗಿಗಳು. ಇಲ್ಲಿರುವ ಶೌಚಾಲಯಗಳಲ್ಲಿ ಕೆಲವಕ್ಕೆ ದೀಪದ ವ್ಯವಸ್ಥೆಯಿಲ್ಲ, ಶೌಚಕ್ಕೆ ಹೋದನಂತರ ಫ್ಲೆಶ್ ಮಾಡಲು ಒತ್ತುವ ಬಟನ್ ಕಾರ್ಯನಿರ್ವಹಿಸುತ್ತಿಲ್ಲ. ಮುಖ್ಯವಾಗಿ ನೀರೇ ಇಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ತಾಳಗುಪ್ಪದಲ್ಲೇ ರೈಲಿಗೆ ನೀರು ತುಂಬಿಸಬೇಕಿತ್ತು. ಇಲ್ಲವಾದರೆ ಶಿವಮೊಗ್ಗದಲ್ಲಿ ನೀರು ತುಂಬಿಸಬೇಕಿತ್ತು. ಆದರೆ ನೀರು ತುಂಬಿಸಿಲ್ಲದ ಕಾರಣ ಶಿವಮೊಗ್ಗದಿಂದ ಮೈಸೂರಿಗೆ ಬರುವವರೆಗೂ ಕೈತೊಳೆಯಲು ಹಾಗೂ ಶೌಚಕ್ಕೆ ಹೋಗಲು ನೀರಿಲ್ಲದೆ ಪ್ರಯಾಣಿಕರು ಸಂಕಟ ಅನುಭವಿಸಿದರು. ರೈಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಪ್ರಯಾಣಿಸುತ್ತಾರೆ. ಪ್ರಯಾಣದ ಅವಽ ೫ ಗಂಟೆಗಳಿಗೂ ಹೆಚ್ಚು ಕಾಲ ಆಗಿರುವುದರಿಂದ ಶೌಚಾಲಯಕ್ಕೆ ಹೋಗುವುದು ಅನಿವಾರ್ಯವಾಗುತ್ತದೆ. ರೈಲಿನ ಅವ್ಯವಸ್ಥೆಯಿಂದಾಗಿ ಶಿವಮೊಗ್ಗದಲ್ಲಿ ರೈಲು ಹತ್ತಿದವರು ಶೌಚಕ್ಕೆ ತೆರಳಲು ಮೈಸೂರು ರೈಲು ನಿಲ್ದಾಣಕ್ಕೆ ಬರಬೇಕಾದ ಪರಿಸ್ಥಿತಿಯಿದೆ. ಬೆಂಗಳೂರು- ಶಿವಮೊಗ್ಗ ನಡುವೆ ಸಂಚರಿಸುವ ರೈಲುಗಳಿಗೆ ಹೊಸ ಬೋಗಿಗಳು ಸೇರಿದಂತೆ ಸಕಲ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಆದರೆ ಮೈಸೂರು ವಿಭಾಗದಿಂದ ಹೊರಡುವ ರೈಲುಗಳಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಪ್ರಯಾಣಿಕರು ಯಾಕಾದರೂ ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದೇವೋ ಎಂದು ಬೇಸರ ಪಟ್ಟುಕೊಳ್ಳುವಂತಾಗಿದೆ. ಮೈಸೂರು ವಿಭಾಗೀಯ ರೈಲ್ವೆ ಅಧಿಕಾರಿಗಳು ರೈಲಿನಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಿದೆ.

-ಎಸ್.ಶ್ರೀದೇವಿ, ಮೈಸೂರು

Tags:
error: Content is protected !!