Mysore
30
overcast clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಪಾಂಡವಪುರದ ಮೆಕ್ಯಾನಿಕ್!‌

ಪಾಂಡವಪುರ: ಪಟ್ಟಣದ ನಿವಾಸಿ, ಮೆಕ್ಯಾನಿಕ್ ಅಲ್ತಾಫ್ ಎಂಬವರಿಗೆ ಕೇರಳದ ಲಾಟರಿ ಸಂಸ್ಥೆಯಿಂದ ಬರೋಬ್ಬರಿ ೨೫ ಕೋಟಿ ರೂ. ಬಹುಮಾನ ಬಂದಿದ್ದು, ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ.

ಕೇರಳದ ಬಹು ನಿರೀಕ್ಷಿತ ‘ತಿರುವೋಣಂ’ ಬಂಪರ್ ಲಾಟರಿ ಸಂಸ್ಥೆಯಿಂದ ೫೦೦ ರೂ. ಕೊಟ್ಟು ಒಂದು ಲಾಟರಿ ಟಿಕೆಟ್ ಖರೀದಿಸಿದ್ದ ಅಲ್ತಾಫ್‌ಗೆ ಲಾಟರಿ ಡ್ರಾನಲ್ಲಿ ಮೊದಲ ಬಹುಮಾನ ದೊರೆತಿದ್ದು, ಬರೋಬ್ಬರಿ ೨೫ ಕೋಟಿ ರೂ. ಗೆದ್ದುಕೊಂಡಿದ್ದಾರೆ. ೨೫ ಕೋಟಿ ರೂ. ಗಳಲ್ಲಿ ಎಲ್ಲ ತೆರಿಗೆ ಕಳೆದುಕೊಂಡು ೧೨. ೮೦ ಕೋಟಿ ರೂ. ಕೈಸೇರಲಿದೆ ಎಂದು ವಿಜೇತ ಅಲ್ತಾಫ್ ತಿಳಿಸಿದ್ದಾರೆ.

ದ್ವಿಚಕ್ರ ವಾಹನಗಳ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಅಲ್ತಾಫ್ ತುಂಬಾ ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ವ್ಯಕ್ತಿ. ಅಲ್ಲಿ ದುಡಿದು ಅಲ್ಲಿ ತಿನ್ನುತ್ತಿದ್ದ ಕುಟುಂಬ ಇವರದು. ಕಡುಬಡತನದಲ್ಲಿ ಜೀವನ ನಡೆಸುತ್ತಿರುವ ಅಲ್ತಾಫ್‌ಗೆ ಇರುವುದಕ್ಕೆ ಸ್ವಂತ ಮನೆ ಇಲ್ಲದೆ ತನ್ನ ಹೆಂಡತಿ ಮಕ್ಕಳೊಂದಿಗೆ ಪಟ್ಟಣದ ಬಸವನಗುಡಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಪಾಂಡವಪುರ ಪಟ್ಟಣದ ಮಂಡ್ಯ ರಸ್ತೆಯಲ್ಲಿ ಸಣ್ಣ ದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಸ್ಕೂಟರ್ ಮೆಕ್ಯಾನಿಕ್ ನಡೆಸುತ್ತಿದ್ದಾರೆ.

ಸಣ್ಣಪುಟ್ಟ ಸಾಲ ಮಾಡಿಕೊಂಡು ತೀರಿಸಲಾಗದಷ್ಟು ಸಂಕಷ್ಟದ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದರು. ಇತ್ತೀಚೆಗೆ ಕೇರಳಕ್ಕೆ ಹೋಗಿದ್ದ ಅಲ್ತಾಫ್ ೫೦೦ ರೂ. ಕೊಟ್ಟು ಲಾಟರಿ ಖರೀದಿಸಿದ್ದರು. ಮೊನ್ನೆ ಹಣವಿಲ್ಲದೆ ತಮ್ಮ ಬಳಿ ಇದ್ದ ಲಾಟರಿ ಟಿಕೇಟನ್ನು ಪಕ್ಕದ ವೆಲ್ಡಿಂಗ್ ಶಾಪ್ ಅಂಗಡಿ ಮಾಲೀಕನಿಗೆ ಕೇವಲ ೨೫೦ ರೂ. ಗೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ, ಅಂಗಡಿ ಮಾಲೀಕ ೨೫೦ ರೂ. ಕೊಟ್ಟು ಲಾಟರಿ ಖರೀದಿಸಲು ನಿರಾಕರಿಸಿದರು. ಅದಾದ ಒಂದು ಗಂಟೆಗೆ ಆ ಲಾಟರಿಗೆ ೨೫ ಕೋಟಿ ರೂ. ಬಹುಮಾನ ಬಂದಿದೆ ಎಂದು ಅಲ್ತಾಫ್ ಸ್ನೇಹಿತ ಸಮಿವುಲ್ಲ ತಿಳಿಸಿದ್ದಾರೆ. ಅಲ್ತಾಫ್‌ಗೆ ಪತ್ನಿ ಸೀಮಾ ಹಾಗೂ ೨೧ ವರ್ಷದ ಮಗ ಹಾಗೂ ೧೮ ವರ್ಷದ ಮಗಳಿದ್ದಾರೆ. ಕಷ್ಟದಲ್ಲಿದ್ದ ಅಲ್ತಾಫ್ ತನ್ನ ಮಗನನ್ನು ಶಾಲೆಗೆ ಕಳುಹಿಸಲಾಗದೆ ಶಾಲೆ ಬಿಡಿಸಿ ಮಗನನ್ನೂ ಕೂಡ ತನ್ನ ಗ್ಯಾರೇಜ್‌ನಲ್ಲಿ ಇರಿಸಿಕೊಂಡು ಸ್ಕೂಟರ್ ರಿಪೇರಿ ಮಾಡುವ ಕೆಲಸ ಕಲಿಸುತ್ತಿದ್ದರು ಎನ್ನಲಾಗಿದೆ. ಅಂತಹ ಬಡವ ಅಲ್ತಾಫ್‌ಗೆ ಅದೃಷ್ಟ ಒಲಿದು ಬಂದಿದೆ. ಇದೀಗ ಕೋಟ್ಯಧೀಶನಾಗಿದ್ದು, ಬಹುಮಾನದ ಹಣ ಪಡೆದುಕೊಳ್ಳುವುದಕ್ಕಾಗಿ ಅಲ್ತಾಫ್ ಸ್ನೇಹಿತರೊಂದಿಗೆ ಕೇರಳಕ್ಕೆ ತೆರಳಿದ್ದಾರೆ.

ಸ್ವಂತ ಉದ್ಯಮ ನಡೆಸಲು ತೀರ್ಮಾನ ಲಾಟರಿಯಲ್ಲಿ ನನಗೆ ೨೫ ಕೋಟಿ ರೂ. ಬಂದಿದೆ ಎಂದ ತಕ್ಷಣ ತುಂಬಾ ಖುಷಿ ಆಯಿತು. ವಿಷಯ ತಿಳಿದು ನೇರವಾಗಿ ಮನೆಗೆ ಹೋಗಿ ನನ್ನ ಹೆಂಡತಿ ಮತ್ತು ಮಗಳಿಗೆ ವಿಷಯ ತಿಳಿಸಿದೆ. ಆದರೆ, ಅವರು ನನ್ನ ಮಾತನ್ನು ನಂಬಲಿಲ್ಲ. ಮೊಬೈಲ್‌ನಲ್ಲಿ ನನ್ನ ಲಾಟರಿ ಸಂಖ್ಯೆಗೆ ೨೫ ಕೋಟಿ ರೂ. ಬಹುಮಾನ ಬಂದಿರುವ ಮೆಸೇಜ್‌ನ್ನು ತೋರಿಸಿದಾಗ ಅವರಿಗೆ ನಂಬಿಕೆ ಬಂತು. ನನ್ನ ಹೆಂಡತಿ ಸಂತೋಷದಿಂದ ಕಣ್ಣೀರು ಹಾಕಿದರು ಎನ್ನುತ್ತಾರೆ ಅಲ್ತಾಫ್. ‌

ನಾನು ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿದ್ದೆ. ಇರುವುದಕ್ಕೂ ಸ್ವಂತ ಮನೆ ಇರಲಿಲ್ಲ. ಬಡತನದಲ್ಲಿ ಜೀವನ ನಡೆಸುತ್ತಿದ್ದೆವು. ನಾನು ಕುಟುಂಬ ಸಮೇತ ಮೈಸೂರಿಗೆ ಹೋಗಿ ನೆಲೆಸಬೇಕೆಂದು ತೀರ್ಮಾನ ಮಾಡಿಕೊಂಡಿದ್ದೆವು. ಕೇರಳಕ್ಕೆ ಹೋದಾಗ ನಾನು ೫೦೦ ರೂ. ಕೊಟ್ಟು ಲಾಟರಿ ಟಿಕೆಟ್ ಪಡೆದುಕೊಂಡಿದ್ದೆ. ಅಲ್ಲಾನ ದಯೆಯಿಂದ ನನಗೆ ಬಹುಮಾನ ಬಂದಿದೆ. ೨೫ ಕೋಟಿ ರೂ. ಗಳಲ್ಲಿ ತೆರಿಗೆ ಹಾಗೂ ಇನ್ನಿತರೆ ಎಲ್ಲ ಖರ್ಚು ವೆಚ್ಚ ಕಳೆದು ೧೨ ಕೋಟಿ ೮ ಲಕ್ಷ ರೂ. ಗಳು ಕೈಗೆ ಸೇರಲಿದೆ. ಎಲ್ಲ ಹಣವನ್ನೂ ನನ್ನ ಬ್ಯಾಂಕ್ ಖಾತೆಗೆ ಹಾಕಲಿದ್ದಾರೆ. ಬರುವ ಹಣದಲ್ಲಿ ಕೈಲಾದ ಸಮಾಜ ಸೇವೆ ಮಾಡಿ ಮೈಸೂರಿನಲ್ಲಿ ಸ್ವಂತ ಮನೆ ಖರೀದಿಸಿಕೊಂಡು ಸ್ವಂತ ಉದ್ಯಮ ನಡೆಸಲು ತೀರ್ಮಾನ ಮಾಡಿಕೊಂಡಿದ್ದೇ
– ಅಲ್ತಾಫ್‌, ಲಾಟರಿ ವಿಜೇತ

 

Tags:
error: Content is protected !!