1990ರಲ್ಲಿ ಎಪಿ.ಸಿಂಗ್ ಅವರು ತಮಗೆ ರಾಜಕೀಯ ಸಂಕಷ್ಟ ಎದುರಾದಾಗ ದಿಢೀರ್ ಎಂದು ಮಂಡಲ್ ಕಮಿಷನ್ ವರದಿಯನ್ನು ಜಾರಿಗೊಳಿಸಿ ಅದರ ಲಾಭದಿಂದ ರಾಜಕೀಯ ಸಂಕಷ್ಟದಿಂದ ದೂರಾದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ವಿ.ಪಿ.ಸಿಂಗ್ರವರ ಮಾರ್ಗವನ್ನೇ ಅನುಸರಿಸುತ್ತಿದ್ದಾರೇನೋ ಅನಿಸುತ್ತದೆ. ಸದ್ಯ ಸಿದ್ದರಾಮಯ್ಯನವರಿಗೆ ಮುಡಾ ಹಗರಣ ತಲೆನೋವಾಗಿ ಪರಿಣಮಿಸಿದೆ. ಈ ಸಂಕಷ್ಟದಿಂದ ಪಾರಾಗಲು ಅವರು ಜಾತಿಗಣತಿ ವರದಿಯನ್ನು ಹೊರತಂದು ಅದರಿಂದ ರಾಜಕೀಯ ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದಾರೇನೋ ಎಂಬ ಅನುಮಾನ ಶುರುವಾಗಿದೆ.
ಇಷ್ಟು ದಿನಗಳ ಕಾಲ ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಲು ಮುಂದಾಗದ ಸಿದ್ದರಾಮಯ್ಯನವರು ಈಗ ಅವಸರದಲ್ಲಿ ಸಿದ್ಧತೆ ಮಾಡಿಕೊಳ್ಳುವುದನ್ನು ನೋಡಿದರೆ ಅವರು ಜಾತಿ ಗಣತಿಯ ವರದಿಯನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುವ ತಂತ್ರಗಾರಿಕೆಯನ್ನು ರೂಪಿಸಿದ್ದಾರೇನೋ ಎಂಬ ಸಂದೇಹ ಮೂಡಿಸಿದೆ. ಜಾತಿ ಗಣತಿ ವರದಿ ಬಿಡುಗಡೆಯಾದ ಮೇಲೆ ‘ಮುಡಾ’ ಹಗರಣದ ವಿರುದ್ಧ ನಡೆಯುತ್ತಿರುವ ಹೋರಾಟ ಕ್ರಮೇಣ ಕಡಿಮೆಯಾಗಿ ಜಾತಿ ಹೆಸರಿನಲ್ಲಿ ಹೋರಾಟಗಳು ಆರಂಭಗೊಂಡರೂ ಆಶ್ಚರ್ಯವಿಲ್ಲ.
-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.