Mysore
32
few clouds

Social Media

ಮಂಗಳವಾರ, 03 ಮಾರ್ಚ್ 2026
Light
Dark

ಜಲಾವೃತವಾಗುವ ಕುಳ್ಳಂಕನಹುಂಡಿ

ಮೈಸೂರು: ನಂಜನಗೂಡಿನಿಂದ ತಿ.ನರಸೀಪುರ ರಸ್ತೆಯಲ್ಲಿ ಹೊರಟು, ಸುಮಾರು 5 ಕಿ.ಮೀ. ಸಾಗಿದ ಬಳಿಕ ಸಿಗುವ ಮುಳ್ಳೂರು ಗ್ರಾಮದ ಗೇಟ್‌ನಲ್ಲಿ ಎಡಕ್ಕೆ ತಿರುವು ಪಡೆದು ನೇರವಾಗಿ ತೆರಳಿದರೆ, ಅಂದಾಜು 5 ಕಿ.ಮೀ. ದೂರದಲ್ಲಿ ಕುಳ್ಳಂಕನಹುಂಡಿ ಗ್ರಾಮ ಸಿಗುತ್ತದೆ. ಅದರ ಮಗ್ಗುಲಿನಲ್ಲೇ ಕಪಿಲಾ ನದಿಯ ಹರಿವು. ಕಣ್ಣನ ತಂಪು ಮಾಡುವ ನದಿಯ ಭವ್ಯ ನೋಟ; ಸ್ಥಳೀಯರನ್ನು ಜಡಗೊಳಿಸಿದೆ ಎನ್ನಬಹುದು.

ಕಾರಣವಿಷ್ಟೇ, ಹೊಸದಾಗಿ ಆ ಊರಿಗೆ ಭೇಟಿ ನೀಡುವ ಮಂದಿಯನ್ನು ನದಿಯು ಅತ್ಯಂತ ಆಕರ್ಷಕವಾಗಿ, ಸೂಜಿಗಲ್ಲಿನಂತೆ ಸೆಳೆಯಬಹದು. ಆದರೆ, ಗ್ರಾಮಸ್ಥರಿಗೆ ನದಿಯ ಅಬ್ಬರದ್ದೇ ಆತಂಕ. ಇತ್ತೀಚೆಗೆ ನದಿಯ ಒಡಲುಕ್ಕಿ ನೀರು ಹರಿದಾಗ, ಹಲವು ಮನೆಗಳಿಗೆ ನೀರು ನುಗ್ಗಿತ್ತು. ಅವರನ್ನು ಗ್ರಾಮದ ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಗೊಳಿಸಲಾಗಿತ್ತು. 125 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಹತ್ತಾರು ಕುಟುಂಬದವರು ಸಾಮಾನ್ಯವಾಗಿ ನೆರೆಯ ಬರೆಗೆ ಒಳಗಾಗುತ್ತಾರೆ. ಉಳಿದವರು ಸುರಕ್ಷಿತವಾಗಿರುತ್ತಾರೆ. ಅವರಿಗೆ ಪ್ರವಾಹ, ನೆರೆಯ ಭಯವಿಲ್ಲ.

ಆದರೆ, ಕಪಿಲಾ ನದಿಯಲ್ಲಿ ಪ್ರವಾಹ ಉಂಟಾದರೆ, ಕುಳ್ಳಂಕನಹುಂಡಿ ಮತ್ತು ಮುಳ್ಳೂರು ಗ್ರಾಮದ ನಡುವಿನ ರಸ್ತೆಯ ಸಂಪರ್ಕ ಕಡಿದು ಹೋಗುತ್ತದೆ. ನದಿಯ ಇನ್ನೊಂದು ಭಾಗದಿಂದ ನೀರು ಊರೊಳಗೆ ನುಗ್ಗುತ್ತದೆ. ಅಂದರೆ ಬಹುತೇಕ ಗ್ರಾಮ ದ್ವೀಪದಂತಾಗುತ್ತದೆ. ಆದರೆ, ದಿನಸಿಗಳಿಗೆ ತಾಪತ್ರಯ ಆಗುವುದಿಲ್ಲ ಎನ್ನುತ್ತಾರೆ ಗ್ರಾಮದವರಾದ ಲೋಕೇಶ್, ರಂಗಸ್ವಾಮಿ, ಅಂಕ, ಜಯಕುಮಾರ್ ಮತ್ತು ರಾಜೇಶ್ ಅವರು.

ಆದರೆ, ಶಾಶ್ವತವಾಗಿ ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು ಗ್ರಾಮವನ್ನೇ ಸ್ಥಳಾಂತರ ಮಾಡಬೇಕು ಎಂಬುದಕ್ಕೆ ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಕೆಲವರು ಆಮೇಲೆ ನೋಡೋಣ ಬಿಡಿ ಎಂದು ಜಾರಿಕೊಂಡರೆ, ಇನ್ನಷ್ಟು ಮಂದಿ ಪಲ್ಲಟವಾಗಲಿ ಎನ್ನುತ್ತಾರೆ.

ಸ್ಥಳಾಂತರಿಸಿದರೆ ಹೋಗುವುದಕ್ಕೆ ಸಿದ್ಧ
ಕುಳ್ಳಂಕನಹುಂಡಿ ಗ್ರಾಮವು ಪ್ರವಾಹ ಬಂದಾಗಲೆಲ್ಲ ಕಂಗಾಲಾಗುತ್ತಿದ್ದು, ಶಾಶ್ವತವಾಗಿ ಸ್ಥಳಾಂತರ ಮಾಡುವ ಉದ್ದೇಶದಿಂದ ಸುಮಾರು 30 ವರ್ಷಗಳ ಹಿಂದೆ ಶಾಸಕರಾಗಿದ್ದ ಡಿ.ಟಿ.ಜಯ ಕುಮಾರ್‌ ಅವರು ನಂಜನಗೂಡು- ತಿ.ನರಸೀಪುರ ರಸ್ತೆಯಲ್ಲಿ ಮುಳ್ಳೂರು ಗೇಟ್ ಬಳಿ ನಿವೇಶನ ಗುರುತಿಸಿದ್ದರು. ಆದರೆ, ನಮ್ಮ ಹಿರೀಕರು ಒಪ್ಪಲಿಲ್ಲ. ಈಗಲೂ ಸ್ಥಳಾಂತರ ಮಾಡಿದರೆ ಹೋಗುವುದಕ್ಕೆ ನಮ್ಮ ಕುಟುಂಬ ಸಿದ್ಧ.
-ಮಹದೇವನಾಯಕ, ಕುಳ್ಳಂಕನಹುಂಡಿ.

 

Tags:
error: Content is protected !!