Mysore
21
broken clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

10 ಮುದ್ದೆ ತಿಂದು 14ನೇ ಬಾರಿ ಪ್ರಶಸ್ತಿ ಪಡೆದ 62ರ ವೃದ್ಧ

ಮಂಡ್ಯ: ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಾವಯವ ಸಿರಿಧಾನ್ಯ ಹಬ್ಬ, ಆಹಾರ ಮೇಳ ಮತ್ತು ವಸ್ತು ಪ್ರದರ್ಶನದಲ್ಲಿ 62 ವರ್ಷದ ವೃದ್ಧರೋರ್ವರು ಬರೋಬ್ಬರಿ 10 ಮುದ್ದೆ ಸೇವಿಸುವ ಮೂಲಕ ಪ್ರಥಮ ಸ್ಥಾನ ಪಡೆದು ಸತತ 14ನೇ ಬಾರಿ ಪ್ರಶಸ್ತಿ ಪಡೆದಿದ್ದಾರೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಈರೇಗೌಡ ಅವರೇ 10 ಮುದ್ದೆ (2 ಕೆ.ಜಿ. 717 ಗ್ರಾಂ) ನುಂಗಿ ಸತತ 14ನೇ ಬಾರಿ ಪ್ರಶಸ್ತಿ ಪಡೆದರು. ಇದೇ ಗ್ರಾಮದ ದಿಲೀಪ್ 6 ಮುದ್ದೆ ಸೇವಿಸಿ ದ್ವಿತೀಯ ಸ್ಥಾನ ಪಡೆದರೆ, ಟಿ.ಎಂ. ಹೊಸೂರಿನ ರವೀಂದ್ರ ಎಂಬವರು 6 ಮುದ್ದೆ ಸೇವಿಸಿ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಅಶೋಕ್, ಮಂಡ್ಯ ಸಾವಯವ ಬೆಲ್ಲ ಸಂಸ್ಥೆಯ ಅಧ್ಯಕ್ಷ ಕಾರಸವಾಡಿ ಮಹದೇವು ಸೇರಿದಂತೆ ಒಟ್ಟು 9 ಮಂದಿ ಭಾಗವಹಿಸಿದ್ದರು.

16 ಮುದ್ದೆ ನುಂಗಿದ್ದ ಭೂಪ:
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಇದೇ ಅರಕೆರೆ ಈರೇಗೌಡ ಅವರು 16 ಮುದ್ದೆ (5 ಕೆ.ಜಿ) ಸೇವಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದರು. ಮೊದಲ ಬಹುಮಾನವಾಗಿ 15 ಕೆ.ಜಿ ಕುರಿಯನ್ನು ನೀಡಲಾಗಿತ್ತು.

20 ನಿಮಿಷಗಳ ಸ್ಪರ್ಧೆ:
ರಾಗಿ ಮುದ್ದೆ ನಾಟಿಕೋಳಿ ಸಾರು ಊಟದ ಸ್ಪರ್ಧೆಗೆ 20 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಯಾರು ಅತಿ ಹೆಚ್ಚು ಮುದ್ದೆ ತಿನ್ನುತ್ತಾರೋ ಅವರು ವಿಜಯಶಾಲಿಗಳು ಎಂದು ಘೋಷಿಸಲಾಗಿತ್ತು. ಮೊದಲು ಎಲ್ಲರ ತಟ್ಟೆಗೂ ಎರಡು ಮುದ್ದೆ, ನಾಟಿ ಕೋಳಿ ಮಾಂಸ, ಒಂದು ಮೊಟ್ಟೆ, ನಾಟಿ ಕೋಳಿ ಸಾರು ಹಾಕಿ ಆನಂತರ ಒಮ್ಮೆಗೆ ತೀರ್ಪುಗಾರರು ಊಟಕ್ಕೆ ಚಾಲನೆ ಕೊಟ್ಟರು. ಮುದ್ದೆ ಖಾಲಿಯಾಗುತ್ತಿದ್ದಂತೆ ತಟ್ಟೆಗೆ ಬಿಸಿ ಬಿಸಿ ಮುದ್ದೆ ಬಂದು ಬೀಳುತ್ತಿದ್ದವು. ಮೊದಲನೇ ಬಹುಮಾನವಾಗಿ 3 ಸಾವಿರ ನಗದು, ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನವಾಗಿ 2 ಸಾವಿರ ರೂ, ತೃತೀಯ ಬಹುಮಾನವಾಗಿ ಒಂದು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!