Mysore
29
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಬಂಡೀಪುರ ಅರಣ್ಯದಲ್ಲಿ ತಲೆಗೆ ಗಾಯವಾಗಿ ಅಸ್ವಸ್ಥಗೊಂಡಿದ್ದ ಮರಿಯಾನೆ ಸಾವು

ಗುಂಡ್ಲುಪೇಟೆ: ತಲೆಗೆ ಗಂಭೀರವಾಗಿ ಗಾಯವಾಗಿದ್ದ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಮರಿ ಗಂಡಾನೆಯೊಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕರೆ ವಲಯ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪ ವಿಭಾಗದ ಕುಂದುಕರೆ ವಲಯ ವ್ಯಾಪ್ತಿಯ ಹೊನ್ನೆಮರದ ತಿಟ್ಟಿನಿಂದ ಡೊಂಕಿದಾರಿ ಡಿ ಲೈನ್‍ನ ಆಲದಮರದ ತಿರುವಿನಲ್ಲಿ ಆ.24ರಂದು ಸುಮಾರು 3 ರಿಂದ 4 ವರ್ಷದ ಗಂಡಾನೆ ಮರಿಯೊಂದು ಅಸ್ವಸ್ಥಗೊಂಡು ನಿತ್ರಾಣದಿಂದ ಜಾನುವಾರು ತಡೆ ಕಂದಕದ ಬಳಿ ನಿಂತಿತ್ತು.

ಗಸ್ತು ಸಮಯದಲ್ಲಿ ಇದನ್ನು ಗಮನಿಸಿದ್ದ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವಲಯ ಅರಣ್ಯಾಧಿಕಾರಿ ದೀಪಾ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಅವರ ಗಮನಕ್ಕೆ ತಂದಿದ್ದಾರೆ.

ತಕ್ಷಣವೇ ಚಿಕಿತ್ಸೆ ನೀಡಲಾಗಿತ್ತು

ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಅಸ್ವಸ್ಥತೆಯಿಂದ ನಿತ್ರಾಣಗೊಂಡು ಕಂದಕದಲ್ಲಿ ನಿಂತಿದ್ದು ಗಂಡಿ ಮರಿಯಾನೆ ತಲೆಗೆ ಗಾಯವಾಗಿರುವುದನ್ನು ಗಮನಿಸಿ ಇಲಾಖಾ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಅವರನ್ನು ಬರಮಾಡಿಕೊಂಡು ಚಿಕಿತ್ಸೆ ಕೊಡಿಸಿದ್ದರು. ಜೊತೆಗೆ ಅರಣ್ಯ ಪ್ರದೇಶಕ್ಕೆ ಬಿಟ್ಟು, ಆನೆಯ ಚಲನವಲನದ ಮೇಲೆ ನಿಗಾ ವಹಿಸಿ ಗಮನಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿತ್ತು.

ನಂತರ ಆ.27ರಂದು ಮತ್ತೆ ಕಂದಕಕ್ಕೆ ಇಳಿದು ನಿತ್ರಾಣಗೊಂಡಿದ್ದ ಮರಿ ಆನೆಗೆ ಇಲಾಖಾ ಪಶು ವೈದ್ಯಾಧಿಕಾರಿ ಚಿಕಿತ್ಸೆ ಕೊಟ್ಟು ಕಬ್ಬು, ಬಾಳೆ, ಜೋಳಗಳನ್ನು ಆಹಾರವಾಗಿ ನೀಡಿದ್ದರು. ಆದರೆ ಆನೆಯು ಆಹಾರ ಸೇವಿಸಲಾಗದೆ ಹಾಗೂ ಚಿಕಿತ್ಸೆಗೆ ಸ್ಪಂದಿಸದೇ ಆ.28ರ ಮಧ್ಯಾಹ್ನ ಮೃತಪಟ್ಟಿದೆ ಎಂದು ಬಂಡೀಪುರ ಅರಣ್ಯಾಧಿಕಾರಿ ಡಾ.ಪಿ.ರಮೇಶಕುಮಾರ್ ಮಾಹಿತಿ ನೀಡಿದ್ದಾರೆ.

ನಂತರ ಬಂಡೀಪುರ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಮೃತ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಕಳೆಬರವನ್ನು ನಿಯಮಾನುಸಾರ ಅರಣ್ಯ ಪ್ರದೇಶದಲ್ಲಿ ವನ್ಯಪ್ರಾಣಿಗಳ ಆಹಾರಕ್ಕಾಗಿ ಬಿಡಲಾಯಿತು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಕುಂದುಕೆರೆ ವಲಯದ ವಲಯ ಅರಣ್ಯಾಧಿಕಾರಿ ಡಿ.ಶ್ರೀನಿವಾಸ, ಇಲಾಖಾ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ, ಆರ್.ರಘುರಾಂ, ಉಪ ವಲಯ ಅರಣ್ಯಾಧಿಕಾರಿ ಬಿ.ಮನೋಹರ, ಗಸ್ತು ವನಪಾಲಕ ಡಿ.ಮಹೇಶ, ವಿಶ್ವನಾಥ ಹಾಗೂ ಇಲಾಖಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಕಾಲಿಗೆ ಪೆಟ್ಟಾಗಿದ್ದ ಮತ್ತೊಂದು ಮರಿಯಾನೆ

ಕೆಲ ದಿನಗಳ ಹಿಂದಷ್ಟೇ ಎಡಗಾಲಿಗೆ ಗಂಭೀರವಾಗಿ ಗಾಯಗೊಂಡಿದ್ದ ಆನೆ ಮರಿಯೊಂದು ಕುಂಟುತ್ತಾ ರಸ್ತೆ ದಾಟಿದ ಘಟನೆ ತಾಲೂಕಿನ ಬಂಡೀಪುರ ರಕ್ಷಿತಾರಣ್ಯದ ಹೆದ್ದಾರಿ ರಸ್ತೆಯಲ್ಲಿ ನಡೆದಿತ್ತು. ಪ್ರವಾಸಿಗರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದ್ದ ಈ ದೃಶ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡಿತ್ತು.

ಸಾರ್ವಜನಿಕರು ಈ ಮರೆಯಾನೆಯ ಬಗ್ಗೆ ಮರುಕ ವ್ಯಕ್ತಪಡಿಸಿದ್ದರು. ಜೊತೆಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಂಡೀಪುರ ಅರಣ್ಯಾಧಿಕಾರಿ ಡಾ ರಮೇಶ್ ಕುಮಾರ್, ಆ ಮರಿಯಾನೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!