Mysore
34
few clouds

Social Media

ಬುಧವಾರ, 29 ಏಪ್ರಿಲ 2026
Light
Dark

ಮಾಗಿ ಚಳಿಯ ಅಬ್ಬರಕ್ಕೆ ರಾಜ್ಯದ ಜನತೆ ಕಕ್ಕಾಬಿಕ್ಕಿ

ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೦ ಡಿ.ಸೆ.

ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಹೆಚ್ಚಾಗಿರುವ ಮಾಗಿ ಚಳಿಯ ವಾತಾವರಣಕ್ಕೆ ಜನರು ಕಕ್ಕಾಬಿಕ್ಕಿಯಾಗಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗುತ್ತಿದೆ. ಅದೇ ರೀತಿ ಕನಿಷ್ಠ ತಾಪಮಾನ ಸರಾಸರಿ ೧೫ ಡಿ.ಸೆ.ಗಿಂತ ಕಡಿಮೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ಮಾತ್ರ ಕನಿಷ್ಠ ತಾಪಮಾನ ೧೫ ಡಿ.ಸೆ.ಗಿಂತ ಹೆಚ್ಚಾಗಿದ್ದು, ಗರಿಷ್ಠ ತಾಪಮಾನವು ೩೦ ಡಿ.ಸೆ.ಗಿಂತ ಹೆಚ್ಚಿದೆ. ಬಿಸಿಲ ನಾಡೆಂದೇ ಬಿಂಬಿಸಲಾಗುವ ಕಲ್ಯಾಣ ಕರ್ನಾಟಕ ಭಾಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಗಣನೀಯವಾಗಿ ಕುಸಿಯುತ್ತಿದ್ದು, ಮೈ ಕೊರೆಯುವ ಚಳಿ ಜನರನ್ನು ಬಾಧಿಸುತ್ತಿದೆ.

ಹಿಂಗಾರು ಮಳೆ ಕೈಕೊಟ್ಟು ವಾಡಿಕೆಗಿಂತ ಕಡಿಮೆಯಾಗಿದೆ. ಅಲ್ಲದೆ ಮೇಲಿಂದ ಮೇಲೆ ಉಂಟಾದ ಚಂಡಮಾರುತಗಳ ಪ್ರಭಾವದಿಂದಲೂ ಆಗಾಗ್ಗೆ ಬೀಸಿದ ಶೀತ ಗಾಳಿ ಜನರನ್ನು ತತ್ತರಿಸುವಂತೆ ಮಾಡಿದೆ. ಮೈಕೊರೆಯುವ ಚಳಿಯ ಜೊತೆಗೆ ಆಗಾಗ್ಗೆ ಬೀಸುವ ಮೇಲ್ಮೈ ಶೀತ ಗಾಳಿಗೆ ಜನರು ಹೈರಾಣಾಗಿದ್ದಾರೆ.

ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆಯ ಹೊದಿಕೆಗಳ ಮೊರೆ ಹೋಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಚಳಿಯ ಪ್ರಮಾಣ ವಾಡಿಕೆಗಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರು ಮುನ್ನಚ್ಚರಿಕೆ ವಹಿಸಿ ರಾತ್ರಿ ಹಾಗೂ ಮುಂಜಾನೆ ಬೆಚ್ಚನೆಯ ಉಡುಪುಗಳನ್ನು ಧರಿಸಿ ಕಾರ್ಯ ನಿರ್ವಹಿಸುವಂತೆ ಸಲಹೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಕನಿಷ್ಠ ತಾಪಮಾನ ೧೦.೪ ಡಿ.ಸೆ, ಬೀದರ್ ೭.೮, ವಿಜಯಪುರ ೭, ಧಾರವಾಡ ೯, ಗದಗ ೧೦.೨, ಕಲಬುರ್ಗಿ ೧೩, ಹಾವೇರಿ ೧೧.೮, ಕೊಪ್ಪಳ ೧೧.೯, ರಾಯಚೂರು ೯.೬, ಆಗುಂಬೆ ೧೦.೬, ಬೆಂಗಳೂರು ೧೩.೩, ದೇವನಹಳ್ಳಿ ವಿಮಾನ ನಿಲ್ದಾಣ ೧೪.೭, ಚಿತ್ರದುರ್ಗ ೧೪, ದಾವಣಗೆರೆ ೧೦, ಹಾಸನ ೮, ಚಿಂತಾಮಣಿ ೮.೪, ಮೈಸೂರು ೧೫.೪, ಶಿವಮೊಗ್ಗ ೧೧.೪ ಡಿ.ಸೆ.ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.

Tags:
error: Content is protected !!