ಬೆಂಗಳೂರು : ಹುಲಿ ದಾಳಿ ನಡೆದಿರುವ ಸ್ಥಳಕ್ಕೆ ಕೂಡಲೇ ಧಾವಿಸಿ, ಮಾನವನ ರಕ್ತದ ರುಚಿ ಕಂಡಿರುವ ಹುಲಿಯ ಸೆರೆಗೆ ತುರ್ತು ಕ್ರಮ ವಹಿಸಲು ಅಗತ್ಯ ಕ್ರಮಜರುಗಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಹುಲಿ ದಾಳಿಯಿಂದ ವ್ಯಕ್ತಿ ಸಾವನ್ನಪ್ಪಿರುವ ಕುರಿತು ಮಾಹಿತಿ ತಿಳಿದ ತಕ್ಷಣವೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದಿದ್ದಾರೆ. ಹುಲಿ ಸೆರೆಗೆ ಬೇಕಾದ ಕ್ರಮಜರುಗಿಸುವಂತೆ ಆದೇಶ ನೀಡಿದ್ದಾರೆ.
ಇದನ್ನು ಓದಿ: ಹುಲಿ ದಾಳಿ | ಅಧಿಕಾರಿಗಳನ್ನ ತರೆಟೆಗೆ ತೆಗೆದುಕೊಂಡ ಶಾಸಕ ಅನಿಲ್ ಚಿಕ್ಕಮಾದು
ಮೈಸೂರು ಜಿಲ್ಲೆ ಸರಗೂರು ತಾಲೂಕು ಮುಳ್ಳೂರು ಬಳಿ ಬೆಣ್ಣೆಗೆರೆ ಗ್ರಾಮದ ಅರಣ್ಯದ ಬಳಿ ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಹುಲಿ ದಾಳಿ ಹೆಚ್ಚುತ್ತಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅವರು, ಕಾಡಿಗೆ ದನ ಮೇಯಿಸಲು ಹೋಗುವವರು, ಕಾಡಿನಂಚಿನ ಗ್ರಾಮಗಳ ನಿವಾಸಿಗಳು ಮತ್ತು ತೋಟದ ಕೆಲಸಗಾರರು ಹುಲಿ, ಚಿರತೆ, ಆನೆ ಇತ್ಯಾದಿ ವನ್ಯಜೀವಿಗಳ ಸಂಚಾರದ ಮಾಹಿತಿ ಇದ್ದಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ದನ ಮೇಯಿಸಲು ರಾಜಶೇಖರ (೫೪) ಎಂಬುವವರು ತೆರಳಿದ್ದ ವೇಳೆ ಹುಲಿ ದಾಳಿ ಮಾಡಿದೆ ಎನ್ನಲಾಗಿದ್ದು, ಇದೊಂದು ತೀವ್ರ ನೋವಿನ ಸಂಗತಿ, ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬದವರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಮೃತರ ಕುಟುಂಬದವರಿಗೆ ಪರಿಹಾರ ನೀಡಲು ಸೂಚಿಸಿರುವುದಾಗಿಯೂ ತಿಳಿಸಿದ್ದಾರೆ.





