ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ನವದೆಹಲಿಯ ‘ಕರ್ತವ್ಯ ಪಥ’ದ ಪಥ ಸಂಚಲನದಲ್ಲಿ ಭಾಗವಹಿಸುತ್ತಿರುವ “ಲಕ್ಕುಂಡಿಯ ಶಿಲ್ಪ ಕಲೆಯ ತೊಟ್ಟಿಲು” ವಿಷಯಾಧಾರಿತ ರಾಜ್ಯದ ಸ್ತಬ್ಧಚಿತ್ರದ ಅಂತಿಮ ಹಂತದ ಸಿದ್ಧತೆಗಳು ಪೊಲೀಸ್ ಬಿಗಿಭದ್ರತೆ ಇರುವ ರಾಷ್ಟ್ರೀಯ ರಂಗಶಾಲಾ ಶಿಬಿರದಲ್ಲಿ ಭರದಿಂದ ಸಾಗುತ್ತಿದೆ.
ನವದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಎಂ.ಇಮಕೊಂಗ್ಲ್ ಜಮೀರ್ ಅವರು ರಾಷ್ಟ್ರೀಯ ರಂಗಶಾಲಾ ಶಿಬಿರಕ್ಕೆ ಶುಕ್ರವಾರದಂದು ಭೇಟಿ ನೀಡಿ, ಸ್ತಬ್ಧಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಧಿಕಾರಿಗಳು ರಾಜ್ಯ ಸ್ತಬ್ಧಚಿತ್ರದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ನವದೆಹಲಿಯ ಕರ್ನಾಟಕ ಭವನದ ಸಹಾಯ ನಿವಾಸಿ ಆಯುಕ್ತರೂ ಆದ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಸಿ.ಮೋಹನ ಕುಮಾರ್, ವ್ಯವಸ್ಥಾಪಕರಾದ ಕೆ.ಆರ್.ವೆಂಕಟೇಶ, ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರ ಉಪ ನಿರ್ದೇಶಕಿ ಎಂ.ಶಾಲಿನಿ, ಪ್ರತಿರೂಪಿ ಸಂಸ್ಥೆಯ ರಾಜಕುಮಾರ್ ಉಪಸ್ಥಿತರಿದ್ದರು.