ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಈಗ ಪ್ರಮುಖ ಘಟ್ಟಕ್ಕೆ ಬಂದಿದೆ. ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಈಗಾಗಲೇ ದೋಷಾರೋಪಣೆ ನಿಗದಿ ಪ್ರಕ್ರಿಯೆ ಮುಗಿದಿದೆ. ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಸಾಕ್ಷಿಗಳ ವಿಚಾರಣೆ ನಡೆಸಬೇಕಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆ ಆರಂಭಿಸಲು ಈಗ ದಿನಾಂಕ ನಿಗದಿ ಆಗಿದೆ. ಡಿಸೆಂಬರ್ 17ರಿಂದ ಸಾಕ್ಷ್ಯ ವಿಚಾರಣೆ ಶುರು ಮಾಡಲು ನ್ಯಾಯಾಲಯ ನಿರ್ಧರಿಸಿದೆ. ಪವಿತ್ರಾ ಗೌಡ ಪರ ವಕೀಲ ಬಾಲನ್ ಅವರಿಗೆ ಕೋರ್ಟ್ನಿಂದ ಮಾಹಿತಿ ನೀಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಸೇರಿ 7 ಆರೋಪಿಗಳು ಹಾಜರಾಗಿದ್ದಾರೆ. ಸಹಾಯಕ ಎಸ್ಪಿಪಿ ಸಚಿನ್ ಅವರು ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್ಗೆ ಸಲ್ಲಿಸಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು, ಎಫ್ಎಸ್ಎಲ್ ಸಾಕ್ಷಿಗಳು, ತಾಂತ್ರಿಕ ಸಾಕ್ಷಿಗಳ ಪ್ರತ್ಯೇಕ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ:-ಸಂಚಾರ ಸಾಥಿ ಆಪ್ ಕಡ್ಡಾಯ : ಆದೇಶ ಹಿಂಪಡೆದ ಕೇಂದ್ರ ಸರ್ಕಾರ
ಸಾಕ್ಷಿಗಳಿಗೆ ಸಮನ್ಸ್ ನೀಡಲು ಸಹಾಯಕ ಎಸ್ಪಿಪಿ ಸಚಿನ್ ಮನವಿ ಮಾಡಿದ್ದಾರೆ. ಅದರಂತೆ, ಸಾಕ್ಷಿ ನಂಬರ್ ಏಳು ಮತ್ತು ಎಂಟಕ್ಕೆ ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗಿದೆ. ರೇಣುಕಾಸ್ವಾಮಿ ತಂದೆ, ತಾಯಿಗೂ ಸಮನ್ಸ್ ನೀಡಲಾಗಿದೆ. ಡಿಸೆಂಬರ್ 17ರಂದು ವಿಚಾರಣೆ ಶುರು ಆಗಲಿದೆ. ಈ ಪ್ರಕರಣದಲ್ಲಿ 260ಕ್ಕೂ ಅಧಿಕ ಸಾಕ್ಷಿಗಳು ಇವೆ. ಎಲ್ಲ ಸಾಕ್ಷಿಗಳ ವಿಚಾರಣೆ ಬಳಿಕ ಕೋರ್ಟ್ ಅಂತಿಮ ತೀರ್ಪು ನೀಡಲಿದೆ.
ಪ್ರಕರಣ ಹಿನ್ನಲೆ:
ದರ್ಶನ್ ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಸಂದೇಶ ಕಳಿಸಿದ್ದ. ಆ ಕಾರಣದಿಂದ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಚಿತ್ರಹಿಂಸೆ ನೀಡಲಾಯಿತು ಎಂಬ ಆರೋಪ ಇದೆ. ಆ ಘಟನೆಯಿಂದ ಆತ ಪ್ರಾಣ ಕಳೆದುಕೊಂಡ. ರೇಣುಕಾಸ್ವಾಮಿ ಶವ ಪತ್ತೆ ಆದ ಬಳಿಕ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನರ ವಿರುದ್ಧ ಕೇಸ್ ದಾಖಲಾಯಿತು.




