Mysore
28
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ನೇಹಾ ಕೊಲೆ ಪ್ರಕರಣ: ಫಯಾಜ್‌ ತನ್ನ ತಂದೆಯನ್ನೇ ಕೊಲ್ಲಲು ಯತ್ನಿಸಿದ್ದ; ನೇಹಾ ತಂದೆ ಆರೋಪ

ಹುಬ್ಬಳ್ಳಿ: ಬಿವಿಬಿ ಕಾಲೇಜು ಆವರಣದಲ್ಲಿ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್‌ಗೆ ಚಾಕುವಿನಿಂದ ಇರಿದು ಕೊಂದ ಪ್ರಕರಣ ಸದ್ಯ ರಾಷ್ಟ್ರಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಆರೋಪಿ ಫಯಾಜ್‌ಗೆ ಗಂಭೀರ ಶಿಕ್ಷೆ ವಿಧಿಸುವಂತೆ ಪ್ರತಿಭಟನೆಗಳು ನಡೆಯುತ್ತಿವೆ.

ನೇಹಾ ಹಿರೇಮಠ್ ತಂದೆ ನಿರಂಜನ್‌ ಹಿರೇಮಠ್‌ ಮಾಧ್ಯಮದವರ ಜತೆ ಮಾತನಾಡಿ ಫಯಾಜ್‌ ಈ ಹಿಂದೆಯೂ ಕೊಲೆ ಯತ್ನ ಮಾಡಿದ್ದ, ತನ್ನ ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದ ಎಂಬ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಫಯಾಜ್‌ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನ್ನ ತಂದೆಯನ್ನೇ ಕೊಲ್ಲಲು ಯತ್ನಿಸಿದ್ದ ಎಂಬ ವಿಚಾರ ತಿಳಿದುಬಂದಿದೆ. ಈ ವಿಚಾರ ಹಾಗೂ ನೇಹಾಳನ್ನು ಪ್ರೀತಿಸುತ್ತಿದ್ದ ಎಂಬ ವಿಚಾರವನ್ನು ಮೊದಲೇ ತಿಳಿಸಬಹುದಿತ್ತಲ್ಲವೇ? ಒಂದು ವೇಳೆ ಈ ವಿಚಾರವನ್ನು ಮೊದಲೇ ತಿಳಿಸಿದ್ದರೆ ನಾವು ಎಚ್ಚೆತ್ತುಕೊಂಡು ಮಗಳನ್ನು ರಕ್ಷಣೆ ಮಾಡುತ್ತಿದ್ದೆವಲ್ಲವೇ? ಅದರ ಬದಲು ಈಗ ಕ್ಷಮೆ ಕೇಳುತ್ತಿದ್ದೇನೆ ಎಂದರೆ ಏನು ಪ್ರಯೋಜನ ಎಂದು ನಿರಂಜನ್‌ ಹಿರೇಮಠ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫಯಾಜ್‌ ಹಲ್ಲೆ ಮಾಡಿದ ಹಾಗೂ ಕೊಲೆ ಯತ್ನ ಮಾಡಿದ್ದ ವಿಚಾರವಾಗಿ ಆತನ ತಂದೆಯೇ ಪೊಲೀಸರ ಮೊರೆ ಹೋಗಿದ್ದರು. ಆತನನ್ನು ಠಾಣೆಗೆ ಕರೆಸಿದ್ದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿಕೊಟ್ಟಿದ್ದರು. ಇದರ ಬದಲು ಆಗಲೇ ಆತನ ವಿರುದ್ಧ ಕ್ರಮ ಕೈಗೊಂಡಿದ್ದರೆ ಆತ ಇಷ್ಟು ಮುಂದುವರೆಯುತ್ತಿದ್ದನೇ? ಅಥವಾ ನಮಗಾದರೂ ಮಾಹಿತಿ ನೀಡಿದ್ದರೆ ನಾವೇ ಮುನ್ನೆಚ್ಚರಿಕೆ ವಹಿಸುತ್ತಿದ್ದೆವಲ್ಲವೇ ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದ್ದಾರೆ ನೇಹಾ ತಂದೆ ನಿರಂಜನ್‌ ಹಿರೇಮಠ್.‌

ಇನ್ನು ಮುಂದುವರಿದು ಮಾತನಾಡಿದ ನಿರಂಜನ್‌ ಕೇವಲ ಕ್ಷಮೆ ಕೇಳುವುದರಿಂದ ಏನು ಪ್ರಯೋಜನವಿಲ್ಲ, ಆತನನ್ನು ಜಾಮೀನು ಕೊಡಿಸಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿ ಬರ್ಬರವಾಗಿ ಕೊಲೆ ಮಾಡಿ. ಇಲ್ಲವಾದರೆ ನೇಣಿಗೇರಿಸಿ. ಆಗ ಮಾತ್ರ ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ, ಅದನ್ನು ಬಿಟ್ಟು ಕ್ಷಮೆ ಎಂದರೆ ಏನೂ ಉಪಯೋಗವಿಲ್ಲ ಎಂದು ಹಿರೇಮಠ ಕಿಡಿಕಾರಿದರು.

Tags:
error: Content is protected !!