ಬೆಂಗಳೂರು: ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ತರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದರು.
ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೂ ಕೂಡ ಸಾಲ ಕೊಡಿ ವಸೂಲಿ ಮಾಡಬೇಡಿ ಎಂದು ಹೇಳಲ್ಲ. ಆದರೆ ವಸೂಲಾತಿ ವೇಳೆ ಕಿರುಕುಳ ನೀಡಬಾರದು. ವಸೂಲಾತಿ ವೇಳೆ ರಿಸರ್ವ್ ಬ್ಯಾಂಕ್ ನಿಯಮ ಪಾಲಿಸಬೇಕು ಎಂದು ಹೇಳಿದರು.
ಕಾನೂನು ಏನು ಹೇಳುತ್ತದೆಯೋ ಅದಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು. ಸಂಜೆ ಐದರ ಬಳಿಕ ವಸೂಲಿಗೆ ಹೋಗಬಾರದು. ಈ ನಿಯಮಗಳನ್ನು ಉಲ್ಲಂಘನೆ ಮಾಡಿದವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಾನೂನು ಉಲ್ಲಂಘಿಸಿದವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಇಂದು ನಾನು ವಾರ್ನಿಂಗ್ ಮಾಡಿದ್ದೇನೆ. ಈ ಬಗ್ಗೆ ಹೊಸ ಕಾನೂನು ಜಾರಿಗೆ ತರುತ್ತೇವೆ ಎಂದರು. ಅಲ್ಲದೇ ಪರವಾನಗಿ ಇಲ್ಲದೇ ಮನಿ ಲ್ಯಾಂಡಿಂಗ್, ಫೈನಾನ್ಸ್ ಮಾಡಬಾರದು. ಪ್ರತಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲು ಸೂಚನೆ ನೀಡಲಾಗಿದೆ ಎಂದರು.
ಇನ್ನು ಸಹಾಯವಾಣಿಗೆ ದೂರುಗಳು ಬಂದರೆ, ಕಾನೂನು ಉಲ್ಲಂಘನೆ ಮಾಡಿದರೆ ಸುಮೊಟೋ ಕೇಸ್ ದಾಖಲು ಮಾಡಿಕೊಳ್ಳಲಾಗುವುದು. ಕೂಡಲೇ ಹೊಸ ಕಾನೂನನ್ನು ಮಾಡುತ್ತೇವೆ. ಕಾನೂನು, ಗೃಹ ಇಲಾಖೆ ಸೇರಿ ಈ ಕೆಲಸ ಮಾಡಲಿವೆ. ಹೊಸ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ತರುತ್ತೇವೆ ಎಂದು ಹೇಳಿದರು.