ಬೆಂಗಳೂರು: ಕೆಪಿಎಸ್ಸಿ ವತಿಯಿಂದ ನಿನ್ನೆ(ಡಿ.29) ಕೆಎಎಸ್ ಮರುಪರೀಕ್ಷೆ ನಡೆದಿದ್ದು, ಕನ್ನಡ ಪ್ರಶ್ನೆ ಪ್ರತಿಕೆಯಲ್ಲಿ ಹಲವಾರು ತಪ್ಪುಗಳು ಕಂಡುಬಂದಿವೆ. ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೆ ಒಂದು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಯೋಗ್ಯತೆಯಿಲ್ಲ ಎಂದು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಎಡವಟ್ಟು
ಕಾಂಗ್ರೆಸ್ ಸರ್ಕಾರಕ್ಕೆ ಒಂದು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಯೋಗ್ಯತೆ ಇಲ್ಲವಾಗಿದೆ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಹೊಣೆಗೇಡಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕಿಡಿಕಾರಿದೆ.
ಪ್ರಶ್ನೆಪತ್ರಿಕೆಗಳ ಭಾಷಾಂತರದಲ್ಲಿ ಗೊಂದಲದಿಂದ ಮುಂದೂಡಿಕೆಯಾಗಿ ಭಾನುವಾರ(ಡಿ.29) ನಡೆದ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯಲ್ಲಿಯೂ ಕರ್ನಾಟಕ ಲೋಕಸೇವಾ ಆಯೋಗ ಮತ್ತೆ ಎಡವಟ್ಟು ಮಾಡಿದೆ. ಕೆಎಎಸ್ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ನೂರಾರು ತಪ್ಪುಗಳು ಕಂಡು ಬಂದಿದ್ದು, ಕನ್ನಡ ಭಾಷಾಂತರದಲ್ಲಿಯೂ ಹಲವು ದೋಷಗಳು ಪತ್ತೆಯಾಗಿದೆ. ಅಲ್ಲದೇ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಮತ್ತು ಒಎಂಆರ್ ಶೀಟ್ ಸಂಖ್ಯೆ ಅದಲು-ಬದಲಾಗಿದ್ದು, ಕೆಪಿಎಸ್ಸಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಬೌದ್ಧಿಕ ದಿವಾಳಿತನವನ್ನು ಜಗಜ್ಜಾಹೀರು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೆಎಎಸ್ ಪರೀಕ್ಷೆಗೆ ನಡೆಸಲು ಕೆಪಿಎಸ್ಸಿ ಒಟ್ಟು 28 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದೆ. ಆದರೆ ಪದೇಪದೇ ತಪ್ಪು ಮಾಡುತ್ತಿರುವ ಕೆಪಿಎಸ್ ಸಿ (KPSC)ಯನ್ನು ಸುಧಾರಣೆ ಮಾಡಲು ಸಾಧ್ಯವಾಗದಷ್ಟು ದುರ್ಬಲವಾಗಿರುವ ಸಿಎಂ ಸಿದ್ದರಾಮಯ್ಯ ನೇತೃತ್ವ ಸರ್ಕಾರದಿಂದ ರಾಜ್ಯದ ಸುಧಾರಣೆ ಸಾಧ್ಯವೇ ? ಎಂದು ಪ್ರಶ್ನಿಸಿದೆ.