ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿರುವ ರಾಜ್ಯ ಬಜೆಟ್ ತಾರತಮ್ಯದಿಂದ ಕೂಡಿದೆ ಎಂಬುದನ್ನು ಸ್ವತಃ ಎಐಸಿಸಿ ಅಧ್ಯಕ್ಷರೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಈ ಕುರಿತು ಸಾಮಾಜಿಕ ಜಾಲತಾನ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಲ್ಯಾಣ ಪಥ ಯೋಜನೆಯ ಪ್ರಾರಂಭೋತ್ಸವ ಬಜೆಟ್ನಲ್ಲಿ ಅನುದಾನ ಹಂಚಿಕೆ, ಯೋಜನೆ ಘೋಷಣೆ ವಿಚಾರದಲ್ಲಿ ಉತ್ತರ ಕರ್ನಾಟಕದ ಜನತೆಗೆ ಮಹಾದ್ರೋಹವಾಗಿದೆ. ಕಲ್ಯಾಣ ಕರ್ನಾಟಕದ ಮಂದಿಗೆ ಅನ್ಯಾಯ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷರೇ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಬಹಿರಂಗ ವೇದಿಕೆಯಲ್ಲೇ ಮಂಗಳಾರತಿ ಎತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಿಮ್ಮದು ತುಷ್ಟೀಕರಣದ ಬಜೆಟ್. ಕೆಲವರಿಗಾಗಿ ಬಹುಜನರ ಹಿತವನ್ನು ಮರೆತಿದ್ದೀರಿ ಎಂಬುದು ಸತ್ಯ. ಅದಕ್ಕೆ ಖರ್ಗೆಯವರ ಮಾತಿನ ಛಡಿ ಏಟುಗಳೇ ಸಾಕ್ಷಿಯಾಗಿದೆ ಎಂದು ತಿರುಗೇಟು ನೀಡಿದೆ.
ಕೇವಲ ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರೇ ಕನ್ನಡದಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತದೆಯೇ?
ಕನ್ನಡಕ್ಕೆ ಪ್ರಥಮ ಆದ್ಯತೆ , ಕನ್ನಡವೇ ಆಡಳಿತ ಭಾಷೆ ಎಂದು ಪುಂಗಿ ಬಿಡುತ್ತಲೇ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ 100 ಉರ್ದು ಶಾಲೆಗಳನ್ನು ಪಬ್ಲಿಕ್ ಶಾಲೆ ಮಾದರಿಯಲ್ಲಿ ಹೈಟೆಕ್ ಮಾಡುತ್ತಿದ್ದಾರೆ.
ಕನ್ನಡವೇ ಗೊತ್ತಿಲ್ಲದ, ಕನ್ನಡ ಓದಲು, ಬರೆಯಲು ಬಾರದ, ಕೇವಲ ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರೇ ಕನ್ನಡದಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತದೆಯೇ? ಇದರಿಂದ ಕನ್ನಡ ಭಾಷೆ ಉಳಿಯುತ್ತದೆಯೇ ? ಮತಬ್ಯಾಂಕ್ಗಾಗಿ ಒಂದು ಸಮುದಾಯವನ್ನು ಅತಿಯಾಗಿ ಓಲೈಕೆ ಮಾಡುತ್ತಿರುವ ಸಿದ್ದರಾಮಯ್ಯ ಉರ್ದುರಾಮಯ್ಯ, ಆಗಿ ಬದಲಾಗಿ ಕನ್ನಡಭಾಷೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಈಗಾಗಲೇ ಸಾವಿರಾರು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಾವಿರಾರು ಸರ್ಕಾರಿ ಶಾಲೆಗಳನ್ನು ದುರಸ್ತಿಮಾಡಲು ಸರ್ಕಾರದ ಬಳಿ ದುಡ್ಡಿಲ್ಲದೇ, ಮರಗಳ ನೆರಳಿನಲ್ಲಿ ವಿದ್ಯಾರ್ಥಿಗಳು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ 100 ಹೈಟೆಕ್ ಉರ್ದು ಶಾಲೆಯ ಘೋಷಣೆ ಕನ್ನಡಕ್ಕೆ ಹಾಗೂ ಕನ್ನಡ ಭಾಷಿಕರ ಮೇಲೆ ಮಾಡುತ್ತಿರುವ ಗಧಾ ಪ್ರಹಾರ ಎಂಬುದರಲ್ಲಿ ಸಂದೇಹವೇ ಇಲ್ಲ ಎಂದು ಕಿಡಿಕಾರಿದೆ.