ಬೆಂಗಳೂರು: ರಾಜಕೀಯದಲ್ಲಿ ತಮಗೂ ಶತ್ರುಗಳಿದ್ದು, ಕ್ಷುಲ್ಲಕ ವಿಚಾರಗಳಿಗೆ ಅಪಪ್ರಚಾರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ತಾವು ಎಬಿವಿಪಿಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 35 ವರ್ಷಗಳಿಂದಲೂ ರಾಜಕೀಯ ಜೀವನದಲ್ಲಿದ್ದೇನೆ. ನನಗೆ ಸೈದ್ಧಾಂತಿಕ ಬದ್ಧತೆ ಇದೆ. ಅದನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ನಾನು ನಿಜವಾದ ಕಾಂಗ್ರೆಸ್ಸಿಗ, ಕಾಂಗ್ರೆಸ್ಸಿಗನಾಗಿಯೇ ಸಾಯುತ್ತೇನೆ ಎಂದಿದ್ದಾರೆ.
ಇದನ್ನು ಓದಿ: ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ಕೊಡುವುದಿಲ್ಲ: ಸಚಿವ ಪರಮೇಶ್ವರ್ ಸ್ಪಷ್ಟನೆ
ತುಮಕೂರಿನಲ್ಲಿ ರಾಣಿ ಅಬ್ಬಕ್ಕ ಅವರ ಮೆರವಣಿಗೆ ನಡೆದಿತ್ತು. ಅಬ್ಬಕ್ಕ ದೇವಿಗೆ ಹೂವಿನಹಾರ ಹಾಕಿ ಎಂದು ಮನವಿ ಮಾಡಿಕೊಂಡರು. ತಮ್ಮೊಂದಿಗೆ ತಿಪಟೂರಿನ ಶಾಸಕ ಷಡಕ್ಷರಿ ಕೂಡ ಇದ್ದರು. ತಾವು ಕಾರಿನಿಂದ ಇಳಿದು ರಾಣಿ ಅಬ್ಬಕ್ಕ ದೇವಿಗೆ ಪುಷ್ಪ ನಮನ ಸಲ್ಲಿಸಿದ್ದೇನೆ. ಅದರ ಹೊರತಾಗಿ ಎಬಿವಿಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇದನ್ನು ವಿವಾದ ಮಾಡುವುದಾದರೆ ಮಾಡಿಕೊಳ್ಳಲಿ, ಅದರಿಂದ ನನಗೇನು ತೊಂದರೆ ಇಲ್ಲ ಎಂದಿದ್ದಾರೆ.
ಪರಮೇಶ್ವರ್ ಏನು ಎಂದು ರಾಜ್ಯದ ಜನರಿಗೆ ಗೊತ್ತಿದೆ. ಇಂತಹ ಕೀಳು ಮಟ್ಟದ ತಂತ್ರಗಾರಿಕೆಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಾರೆ. ಪಕ್ಷದ ಒಳಗೆ ಹಾಗೂ ಹೊರಗೆ ಇರುವವರು ಅಪಪ್ರಚಾರ ಮಾಡುವುದು ಸಾಮಾನ್ಯ. ನಾನು ಏನು ಎಂದು ಪದೇ ಪದೇ ಸಾಬೀತುಪಡಿಸುವ ಅಗತ್ಯ ಇಲ್ಲ ಎಂದು ಹೇಳಿದರು.




