ಬೆಂಗಳೂರು: ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ 30 ಸಾವಿರ ಕೋಟಿ ತೆರಿಗೆ ಹಂಚಿಕೆ ಮಾಡಿದ್ದು, ಕರ್ನಾಟಕಕ್ಕೆ ಕೇವಲ 6 ಸಾವಿರ ಕೋಟಿ ನೀಡಿದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಶುಕ್ರವಾರ ರಾಜ್ಯಕ್ಕೆ ಬರಬೇಕಾಗಿದ್ದ 6 ಸಾವಿರ ಕೋಟಿ ತೆರಿಗೆಯನ್ನು ಹಂಚಿಕೆ ಮಾಡಿದೆ. ಇದರ ಜೊತೆಗೆ ಅನೇಕ ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿದ್ದು, ಉತ್ತರ ಪ್ರದೇಶಕ್ಕೆ ಅತೀ ಹೆಚ್ಚು ತೆರಿಗೆ ನೀಡಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಕಿಡಿಕಾರುತ್ತಿದೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, ಉತ್ತರ ಪ್ರದೇಶಕ್ಕೆ 30 ಸಾವಿರ ಕೋಟಿ, ತಮಿಳುನಾಡಿಗೆ 7 ಸಾವಿರ ಕೋಟಿ, ಚಿಕ್ಕ ರಾಜ್ಯವಾದ ಆಂಧ್ರಪ್ರದೇಶಕ್ಕೆ 7 ಸಾವಿರ ಕೋಟಿ ತೆರಿಗೆ ಹಂಚಿಕೆ ಮಾಡಿದೆ. ಆದರೆ ಕರ್ನಾಟಕಕ್ಕೆ ಕೇವಲ 6 ಸಾವಿರ ಕೋಟಿ ರೂ ಕೊಟ್ಟು ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ತಾರತಮ್ಯದ ಬಗ್ಗೆ ಧ್ವನಿ ಎತ್ತಬೇಕು ಎಂದು ಕಿಡಿಕಾರಿದರು.
ಇನ್ನು ಮುಂದಿನ ಅವಧಿಗೆ ಡಿಕೆಶಿ ಸಿಎಂ ಆಗಲಿ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ಕುರಿತು ಮಾತನಾಡಿದ ಅವರು, ಕೆ.ಎನ್.ರಾಜಣ್ಣ ಏನು ಮಾತನಾಡಿದ್ದಾರೋ ಗೊತ್ತಿಲ್ಲ. ರಾಜಣ್ಣ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಬೇಕು. ರಾಜಣ್ಣ ಏನನ್ನೇ ಆದರೂ ಹೇಳಬೇಕಾದರೆ ಸಿಎಂ ಮುಂದೆ ಹಾಗೂ ಹೈಕಮಾಂಡ್ ಮುಂದೆ ಹೇಳಲಿ ಎಂದು ಟಾಂಗ್ ಕೊಟ್ಟರು.