Mysore
30
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಪಟ್ಟಾ ಜಮೀನು ಹೊಂದಿರುವವರ ಅರಣ್ಯ ಹಕ್ಕು ಅರ್ಜಿ ಪರಿಶೀಲನೆ: ಈಶ್ವರ್‌ ಖಂಡ್ರೆ ಸೂಚನೆ

ಬೆಂಗಳೂರು: ಅರಣ್ಯ ಹಕ್ಕು ಕಾಯಿದೆ ಅಡಿ ಸೌಲಭ್ಯಕ್ಕಾಗಿ ಪಟ್ಟಾ ಜಮೀನು ಹೊಂದಿರುವವರೂ ಅರ್ಜಿ ಸಲ್ಲಿಸಿದ್ದರೆ, ಅಂತಹ ಅರ್ಜಿಗಳನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ  ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.2) ಈ ವಿಚಾರಕ್ಕೆ ಸಂಬಂಧಿಸಿದಂತೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ ಅವರು, ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಹ ಫಲಾನುಭವಿಗಳಿಗೆ ಅಂದರೆ 2005ರ ಡಿಸೆಂಬರ್ 13ಕ್ಕೆ ಮೊದಲು ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಬಳಸುತ್ತಿರುವ ಮತ್ತು ಅರಣ್ಯದಲ್ಲಿ ವಾಸಿಸುತ್ತಿರುವವರಿಗೆ ಅನ್ಯಾಯವಾಗದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದರು.

ಅರಣ್ಯ ಹಕ್ಕು ಕಾಯಿದೆ ಅಡಿ ಇನ್ನೂ ಸಾವಿರಾರು ಅರ್ಜಿಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಕಂದಾಯ ಭೂಮಿ (ಪಟ್ಟಾ ಜಮೀನು) ಮಾಲೀಕತ್ವ ಹೊಂದಿರುವವರೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿದ್ದರೆ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಹೇಳಿದರು.

ಇನ್ನೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಸಲ್ಲಿಸಿರುವವರಿಂದ ತಮಗಾಗಲೀ, ತಮ್ಮ ಕುಟುಂಬದ ಸದಸ್ಯರಿಗಾಗಲೀ 2005ರ ಡಿಸೆಂಬರ್ 13ಕ್ಕೆ ಮೊದಲು ಅರಣ್ಯ ಮತ್ತು ಪಟ್ಟಾ ಜಮೀನು ಸೇರಿದಂತೆ 3 ಎಕರೆಗಿಂತ ಹಚ್ಚು ಜಮೀನು ಇರಲಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ (ಡಿಕ್ಲರೇಷನ್) ಬರೆಸಿಕೊಳ್ಳಲು ಮತ್ತು ‘ನಮೂನೆ-ಎ’ಯಲ್ಲಿರುವ ಅಂಶಗಳನ್ನು ಕಡ್ಡಾಯವಾಗಿ ಮತ್ತು ನಿಯಮಾನುಸಾರ ಪರಿಶೀಲಿಸಲು ಹಾಗೂ ತಪ್ಪು/ಸುಳ್ಳು ಮಾಹಿತಿ ಒದಗಿಸಿ ಕ್ಲೇಮ್ ಅರ್ಜಿ ಸಲ್ಲಿಸಿರುವವರನ್ನು ಅರಣ್ಯಹಕ್ಕು ಕಾಯಿದೆ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಬೇಕು ಎಂದು ತಿಳಿಸಿದರು.

Tags: