ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ, ಎಲ್ಲರೂ ಅಗತ್ಯ ಮಾಹಿತಿ ನೀಡುವುದು ಸೂಕ್ತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು, ಅಪೇಕ್ಷೆಯನ್ನೂ ಪಡಬಹುದು. ಆದರೆ ಸಮೀಕ್ಷೆಯಂತೂ ನಡೆಯುತ್ತದೆ ಎಂದರು.
ಈ ಹಿಂದೆ ನಡೆದಿದ್ದಂತಹ ಸಮೀಕ್ಷೆ ಸರಿಯಿಲ್ಲ ಎಂದು ಹೇಳಿದ್ದಕ್ಕಾಗಿಯೇ ನಮ್ಮ ಸರ್ಕಾರ ಹೊಸದಾಗಿ ಸಮೀಕ್ಷೆ ನಡೆಸುತ್ತಿದೆ. ಈಗಲೂ ವಿರೋಧ ಮಾಡುವುದು ಅರ್ಥಹೀನ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:-ನನ್ನ ಒಬ್ಬನಿಗೆ ಸಮೀಕ್ಷೆ ಮಾಡಲು ಇಷ್ಟೊಂದು ಜನರು ಬೇಕಾ?: ಸಚಿವ ವಿ.ಸೋಮಣ್ಣ ಕ್ಲಾಸ್
ಸಮೀಕ್ಷೆಯಲ್ಲಿ ಕೆಲವು ಖಾಸಗಿ ಮಾಹಿತಿಯ ಪ್ರಶ್ನೆಗಳಿವೆ. ಅವುಗಳಿಗೆ ಉತ್ತರ ನೀಡಬೇಕಿಲ್ಲ. ನ್ಯಾಯಾಲಯ ಕೂಡ ಈ ವಿಚಾರವನ್ನು ಸ್ಪಷ್ಟ ಪಡಿಸಿದೆ. ಕುರಿ, ಕೋಳಿ ಬಗ್ಗೆ, ವಾಚು, ಉಂಗುರ, ಫ್ರಿಡ್ಜ್, ಚಿನ್ನ ಎಷ್ಟಿವೆ ಎಂಬ ಬಗ್ಗೆ ಮಾಹಿತಿ ಕೇಳಬೇಡಿ, ಅವೆಲ್ಲಾ ಖಾಸಗಿ ವಿಚಾರ ಎಂದು ಅಧಿಕಾರಿಗಳಿಗೆ ನಾನು ಕೂಡ ಸೂಚನೆ ನೀಡಿದ್ದೇನೆ. ಅವರು ಯಾವ ರೀತಿ ಪರಿಗಣಿಸುತ್ತಾರೋ ಗೊತ್ತಿಲ್ಲ ಎಂದರು.
ಹೊಸದಾಗಿ ನಡೆಯುತ್ತಿರುವ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬೇಕು. ನಿಗದಿತ ಅವಧಿಯಲ್ಲಿ ಸಮೀಕ್ಷೆ ಮುಗಿಯದಿದ್ದರೆ ಸಮಯ ವಿಸ್ತರಣೆಯ ಬಗ್ಗೆ ನಾನು ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಆಯೋಗ ಮತ್ತು ಇಲಾಖೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.





