ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಮುಖದಲ್ಲಿ ತಮ್ಮ 92ನೇ ಜನದಿನವನ್ನು ಆಚರಿಸಿಕೊಂಡರು.
ಇಂದು ಬೆಳಿಗ್ಗೆ ತಿರುಮಲದ ವೆಂಕಟೇಶ್ವರ ಸ್ವಾಮಿ ದರ್ಶನವನ್ನು ಕುಟುಂಬ ಸದಸ್ಯರೊಂದಿಗೆ ಪಡೆದು ನಂತರ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗೌಡರು ಪಾಲ್ಗೊಂಡರು.
ಬಳಿಕ ಮಾತನಾಡಿದ ಅವರು, ಕಳೆದ 1986 ರಿಂದಲೂ ನನ್ನ ಹುಟ್ಟುಹಬ್ಬವಾದ ಮೇ 18 ರಂದು ಪ್ರತಿವರ್ಷ ತಿರುಪತಿಗೆ ಹೋಗಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯುತ್ತಿದ್ದೇನೆ. ಆರು ವರ್ಷಗಳ ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಜೊತೆಯಲ್ಲಿ ತಿರುಪತಿಗೆ ಹೋಗಿದ್ದೆ. ಅನಂತರ ಮಂಡಿನೋವಿನ ಕಾರಣದಿಂದಾಗಿ ತಿರುಪತಿಗೆ ಹೋಗಿರಲಿಲ್ಲ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರರೆಡ್ಡಿ ಅವರು ತಿರುಮಲದಲ್ಲಿ 12 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಿದ್ದಾರೆ. ಅದರ ಉದ್ಘಾಟನೆಯನ್ನು ನೆರವೇರಿಸಿದ್ದೇನೆ ಎಂದರು.
ಕುಮಾರಸ್ವಾಮಿಯವರಿಗೆ ನವದೆಹಲಿಯಲ್ಲಿ ಹೊಸಮನೆಯನ್ನು ಕೇಂದ್ರ ಸರ್ಕಾರ ಕೊಟ್ಟಿದೆ. ನಾಳೆ ಆ ಮನೆ ಪ್ರವೇಶವನ್ನು ಮಾಡುತ್ತಾರೆ. ಪ್ರಧಾನಿ ನರೇಂದ್ರಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ಸೇರಿದಂತೆ ಹಲವು ನಾಯಕರು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.
ಪ್ರಧಾನಿ ಹಾಗೂ ಅಮಿತ್ ಷಾ ಅವರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ರಾಷ್ಟ್ರಪತಿಗಳು, ಮಾಜಿ ರಾಷ್ಟ್ರಪತಿಗಳು, ರಾಜ್ಯಪಾಲರು ಕೂಡ ಶುಭಾಶಯ ಕೋರಿದ್ದಾರೆ.
ನಾನು ಪಕ್ಷದ ಒಬ್ಬ ಕಾರ್ಯಕರ್ತನಾಗಿ ಸಾಧ್ಯವಾದಷ್ಟು ಕೆಲಸ ಮಾಡುತ್ತೇನೆ. ವ್ಹೀಲ್ಚೇರ್ನಲ್ಲಿ ರಾಜ್ಯಸಭೆಗೆ ಹೋಗುತ್ತೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಯಾವುದೇ ಅಂಜಿಕೆ ಇಲ್ಲದೆ ಮಾತನಾಡುತ್ತೇನೆ ಎಂದರು.
ಮೋದಿ, ಸಿದ್ದರಾಮಯ್ಯ ಸೇರಿ ಹಲವರಿಂದ ಶುಭಾಶಯ ಮಾಜಿ ಪ್ರಧಾನಿ ದೇವೇಗೌಡರಿಗೆ, ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರದ ಹಲವು ನಾಯಕರು ಶುಭಾಶಯ ಕೋರಿದ್ದಾರೆ.





