ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ದಿನೇ ದಿನೇ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಮತ್ತೊಂದೆಡೆ ಡೆಂಗ್ಯೂಯಿಂದ ಜನರು ಸಾವನ್ನಪ್ಪಿರುವುದು ಕೂಡ ಆತಂಕವನ್ನುಂಟು ಮಾಡುತ್ತಿದೆ. ಡೆಂಗ್ಯೂಗೆ ಬಲಿಯಾದವರ ಬಗ್ಗೆ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಯವರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಕೇಸ್ ಗಳು ಹೆಚ್ಚಳವಾಗುತ್ತಿದ್ದು,೫೩೭೪ ಹೆಚ್ಚು ಕೇಸ್ ದಾಖಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದೂವರೆ ಸಾವಿರ ಸನಿಹಕ್ಕೆ ತಲುಪಿದೆ . ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿಗೆ ಇದುವರೆಗೂ ಏಳು ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವಿನ ಬಗ್ಗೆ ಡೆತ್ ಆಡಿಟ್ ಮಾಡುವುದಕ್ಕೆ ಇಲಾಖೆ ಮುಂದಾಗಿದೆ.
ಖಾಸಗಿ ಆಸ್ಪತ್ರೆಯವರು ಕೂಡ ಡೆಂಗ್ಯೂ ಡೆತ್ ಗಳು ಹಾಗೂ ಪ್ರಕರಣಗಳನ್ನ ನೋಟಿಫೈ ಮಾಡಬೇಕು. ಯಾವುದೇ ಖಾಸಗಿ ಆಸ್ಪತ್ರೆಗೆ ಬರುವ ಡೆಂಗ್ಯೂ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಜೊತೆಗೆ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು ಹಾಗೂ ಡೆತ್ ಮಾಹಿತಿಯನ್ನು ಹಂಚಿಕೊಳ್ಳಲು ಸಚಿವರು ಸೂಚಿಸಿದ್ದು, ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಯವರು ಡೆಂಗ್ಯೂ ಮಾಹಿತಿಯನ್ನು ಮುಚ್ಚಿಡಬಾರದು.