Mysore
15
clear sky

Social Media

ಭಾನುವಾರ, 18 ಜನವರಿ 2026
Light
Dark

ಅಳಿಯನ ಆತ್ಮಹತ್ಯೆ ಬಗ್ಗೆ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಿಷ್ಟು

ದಾವಣಗೆರೆ: ಅಳಿಯನ ಸಾವಿನ ಬಳಿಕ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿಕೆ ನೀಡಿದ್ದು, ಮಕ್ಕಳಿಲ್ಲದ ಕೊರಗಿತ್ತು ಜೊತೆಗೆ ಕುಡಿತದ ಚಟವಿತ್ತು ಎಂದಿದ್ದಾರೆ.

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅಳಿಯ ಕೆ.ಜಿ ಪ್ರತಾಪ್‌ ಕುಮಾರ್‌ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.

ಅಳಿಯನ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು, ೨೦೦೮ರಲ್ಲಿ ನನ್ನ ಪುತ್ರಿ ಜೊತೆ ಪ್ರತಾಪ್‌ ಕುಮಾರ್‌ ವಿವಾಹವಾಗಿತ್ತು. ನನ್ನ ವ್ಯವಹಾರ, ರಾಜಕೀಯ ಸೇರಿದಂತೆ ಎಲ್ಲವನ್ನೂ ಪ್ರತಾಪ್‌ ಮನೆ ಮಗನ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದ. ಮದುವೆಯಾಗಿ ೧೬ ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗು ಇತ್ತು.

ಈ ಹಿನ್ನೆಲೆಯಲ್ಲಿ ಸೆರೋಗಸಿ ಮೂಲಕ ಮಗು ಪಡೆಯಲು ಕೋರ್ಟ್‌ ಅನುಮತಿಯನ್ನು ಕೇಳಿದ್ದೆವು. ಕೋರ್ಟ್‌ ಅನುಮತಿ ನೀಡುವುದರಲ್ಲಿತ್ತು. ಪ್ರತಾಪ್‌ ಕುಮಾರ್‌ ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದರು. ಇದರಿಂದಾಗಿ ಅವರ ಲಿವರ್‌ ಕಿಡ್ನಿ ಸಮಸ್ಯೆ ಕಾಡಿತ್ತು. ಆಸ್ಪತ್ರೆಯಲ್ಲಿ ಚೇತರಿಕೆ ಕಂಡ ಬಳಿಕ ಅವರು ಹುಟ್ಟೂರು ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮಕ್ಕೆ ಹೋಗಿದ್ದರು.

ಆದರೆ ಇಂದು ಮಧ್ಯಾಹ್ನದ ವೇಳೆಗೆ ಮೆಕ್ಕೆಜೋಳಗಳಿಗೆ ಹಾಕುವ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದ್ದಾರೆಂದು ಅವರ ಸಹೋದರ ಪ್ರಭುದೇವ ನನಗೆ ಕರೆ ಮಾಡಿದ್ದರು. ನಂತರ ಪ್ರತಾಪ್‌ ಕುಮಾರ್‌ ಅವರ ಹುಡುಕಾಟದಲ್ಲಿ ತೊಡಗಿದ್ದೆವು. ದಾವಣಗೆರೆ ಮತ್ತು ಶಿವಮೊಗ್ಗ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದೆವು. ಹೊನ್ನಾಳಿ ಸಮೀಪದ ಏರಿಯಾದಲ್ಲಿ ಅವರ ಮೊಬೈಲ್‌ ಆನ್‌ ಆಗಿತ್ತು.

ಕರೆ ಮಾಡಿದಾಗ ವಿಷ ಸೇವಿಸಿದ್ದ ಬಗ್ಗೆ ನಮಗೆ ಮಾಹಿತಿ ನೀಡಿದ್ದರು. ತಕ್ಷಣವೇ ಅವರನ್ನು ಹೊನ್ನಾಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ದಾವಣಗೆರೆ ಆಸ್ಪತ್ರೆಗೆ ಕಳಿಸಲು ಯೋಜಿಸಿದ್ದೆವು. ಆದರೆ ಮಾರ್ಗಮಧ್ಯೆ ಪ್ರತಾಪ್ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸಾಕಷ್ಟು ನೋವು ಸಂಕಟ ಆಗುತ್ತಿದೆ. ನಾಳೆ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.

Tags:
error: Content is protected !!