ಚೆನ್ನೈ: ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಎರಡನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಮೊದಲನೇ ಕ್ವಾಲಿಫಯರ್ ಪಂದ್ಯದಲ್ಲಿ ಸಿಎಸ್ ಕೆ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ.
ಕಳೆದ ವರ್ಷದ ಐಪಿಎಲ್ ಕೂಟದ ಆರಂಭದಲ್ಲೇ ರವೀಂದ್ರ ಜಡೇಜಾ ಅವರು ಸಿಎಸ್ ಕೆ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಆದರೆ ತಂಡದ ಸತತ ಸೋಲಿನ ಕಾರಣದಿಂದ ಅವರು ನಾಯಕನ ಸ್ಥಾನವನ್ನು ತೊರೆದಿದ್ದರು. ಕ್ಯಾಪ್ಟನ್ಸಿ ಪಟ್ಟ ಮತ್ತೆ ಧೋನಿ ಪಾಲಾಗಿತ್ತು. ಇದರ ಬಳಿಕ ಧೋನಿ ಮತ್ತು ಜಡ್ಡು ನಡುವೆ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಜಡೇಜಾ ಕೂಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಸಿಎಸ್ ಕೆ ಫೋಟೊಗಳನ್ನು ಅಳಿಸಿ ಹಾಕಿದ್ದರು.
ಇದೀಗ ಜಡ್ಡು ಮತ್ತು ಧೋನಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತದೆ. ಕಳೆದ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಬಳಿಕ ಇದು ಆರಂಭವಾಗಿದೆ. ಹೊಸದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಗೆಲುವು ಸಾಧಿಸಿತ್ತು. ಆಟ ಮುಗಿದ ನಂತರ, ಸಿಎಸ್ ಕೆ ನಾಯಕ ಧೋನಿ ಮತ್ತು ಆಲ್ ರೌಂಡರ್ ಜಡೇಜಾ ಅವರು ಮೈದಾನದಿಂದ ಹೊರನಡೆಯುತ್ತಿರುವಾಗ ನಾಟಕೀಯವಾಗಿ ಮಾತನಾಡುತ್ತಿರುವುದು ಕಂಡು ಬಂತು.
Definitely 👍 pic.twitter.com/JXZNrMjVvC
— Ravindrasinh jadeja (@imjadeja) May 21, 2023
ರವೀಂದ್ರ ಜಡೇಜಾ ಸ್ವಲ್ಪವೂ ಸಂತೋಷವಾಗಿರಲಿಲ್ಲ, ಅವರ ಮುಖಭಾವವು ಅದನ್ನೇ ಸೂಚಿಸುತ್ತಿತ್ತು. ಮತ್ತೊಂದೆಡೆ, ಧೋನಿ ತನ್ನ ಜಡೇಜಾಗೆ ಏನನ್ನೂ ವಿವರಿಸುತ್ತಿದ್ದರೂ ಅವರ ಮುಖಚರ್ಯೆ ಬದಲಾಗಲಿಲ್ಲ. ಈ ಮಾತುಕತೆಯ ಕೆಲವು ಗಂಟೆಗಳ ನಂತರ ಜಡೇಜಾ ಟ್ವೀಟ್ ಮಾಡಿದ್ದು, ಇದು ಅಭಿಮಾನಿಗಳನ್ನು ಮತ್ತಷ್ಟು ಗೊಂದಲಕ್ಕೆ ದೂಡಿತು.
ಟ್ವಿಟರ್ ನಲ್ಲಿ ಜಡೇಜಾ ಫೋಟೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ “ಕರ್ಮವು ನಿಮ್ಮ ಬಳಿಗೆ ಮರಳುತ್ತದೆ, ಬೇಗನೇ ಅಥವಾ ತಡವಾಗಬಹುದು. ಆದರೆ ಅದು ಖಂಡಿತವಾಗಿಯೂ ಬರುತ್ತದೆ.” ಎಂದು ಬರೆಯಲಾಗಿದೆ. ಅಲ್ಲದೆ ಡೆಫಿನೇಟ್ಲಿ (Definitely) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಡೆಫಿನೇಟ್ಲಿ ಎನ್ನುವುದು ಧೋನಿಯ ಪ್ರಸಿದ್ದ ಮಾತು.





