Mysore
24
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

20 ವರ್ಷಗಳ ನಂತರ ಒಂದಾದ ಉದ್ಧವ್‌-ರಾಜ್‌ ಠಾಕ್ರೆ

Uddhav and Raj Thackeray Reunite After 20 Years

ಮುಂಬೈ: ಕಳೆದ ಎರಡು ದಶಕಗಳಿಂದ ಹಾವು-ಮುಂಗೂಸಿಯಂತಿದ್ದ ಹಿಂದೂ ಹೃದಯ ಸಾಮ್ರಾಟದ ಬಾಳಠಾಕ್ರೆ ಕುಟುಂಬದ ಕುಡಿಗಳಾದ ರಾಜ್ ಠಾಕ್ರೆ-ಉದ್ದವ್ ಠಾಕ್ರೆ ಪರಸ್ಪರ ವೈಮನಸ್ಸು ಮರೆತು ಒಂದಾಗಿ ಕೈ ಜೋಡಿಸಿದ ಅಪರೂಪದ ಪ್ರಸಂಗಕ್ಕೆ ವಾಣಿಜ್ಯ ನಗರಿ ಮುಂಬೈ ಸಾಕ್ಷಿಯಾಯಿತು.

ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿದ್ದ ಸರ್ಕಾರದ ವಿರುದ್ಧ ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಅವರುಗಳು ಮುಂಬೈನ ಪ್ರತಿಷ್ಠಿತ ವರ್ಲಿಯಲ್ಲಿ ಬೃಹತ್ ವಿಜಯೋತ್ಸವ ರ್ಯಾಲಿ ನಡೆಸಿದರು.

ರ್ಯಾಲಿ ಪ್ರಯುಕ್ತ ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಎರಡು ದಶಕಗಳ ನಂತರ ಒಂದೇ ವೇದಿಕೆಯಲ್ಲಿ ತಮ್ಮ ಅಹಂ ಮರೆತು ಒಂದಾಗಿದ್ದು, ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ಸಮೀಕರಣವನ್ನು ಬರೆಯಲಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.

ಶಿವಸೇನೆ ಸಂಸ್ಥಾಪಕರಾಗಿದ್ದ ಬಾಳಾ ಠಾಕ್ರೆ ನಿಧನದ ನಂತರ ಕೆಲವು ಕೌಟುಂಬಿಕ ಕಾರಣಗಳ ಹಿನ್ನೆಲೆಯಿಂದ ರಾಜ್ ಠಾಕ್ರೆ ಶಿವಸೇನೆಯಿಂದ ಹೊರಬಂದು ಮಹಾರಾಷ್ಟ್ರ ನವ ನಿರ್ಮಾಣ್ ಸೇನೆ ಎಂಬ ಹೊಸ ಪಕ್ಷವನ್ನು ಕಟ್ಟಿದ್ದರು.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ, ಎನ್‍ಎಂಎಸ್, ಎನ್‍ಸಿಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಎನ್‍ಡಿಎ ಅಬ್ಬರದ ಮುಂದೆ ಮಕಾಡೆ ಮಲಗಿದ್ದವು. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‍ಇಎಸ್) ಪ್ರಕಾರ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರವನ್ನು ಅಳವಡಿಸಲು ಮುಂದಾಗಿತ್ತು.

ಈ ಪ್ರಕಾರ ರಾಜ್ಯಗಳು ಸ್ಥಳೀಯ ಭಾಷೆಯ ಜೊತೆಗೆ ಇಂಗ್ಲೀಷ್ ಹಾಗೂ ಹಿಂದಿಯನ್ನು ಕಡ್ಡಾಯಗೊಳಿಸಲು ಮುಂದಾಗಿತ್ತು. ಇದನ್ನು ಮಹಾರಾಷ್ಟ್ರ ಕೂಡ ಸರ್ಕಾರಿ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಕಡ್ಡಾಯವಾಗಿ ಹಿಂದಿ ಭಾಷೆಯನ್ನು ಕಲಿಯಬೇಕೆಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದು ರಾಜ್ಯದಲ್ಲಿ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.

ಮರಾಠಿ ಅಸ್ಮಿತೆಗೆ ಧಕ್ಕೆ ಬರಲಿದೆ ಎಂಬ ಏಕೈಕ ಕಾರಣಕ್ಕಾಗಿ ತಮ್ಮ ಹಿಂದಿನ ಎಲ್ಲಾ ವೈಮನಸ್ಸು ಮರೆತು ಠಾಕ್ರೆ ಕುಟುಂಬದ ಇಬ್ಬರು ಬಲಿಷ್ಠ ನಾಯಕರು ಮರಾಠಿಗರಿಗಾಗಿ ಕೈ ಜೋಡಿಸಿ, ಮಾತೃಭಾಷೆ ವಿಷಯದಲ್ಲಿ ರಾಜೀ ಇಲ್ಲ ಎಂಬ ಸಂದೇಶ ರವಾನಿಸಿದರು.

Tags:
error: Content is protected !!