ಮುಂಬೈ: ಮಹಾರಾಷ್ಟ್ರದ ಜಲಂಗಾವ್ನಲ್ಲಿ ಇಂದು ಭೀಕರ ರೈಲು ದುರಂತ ಸಂಭವಿಸಿದೆ.
ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದು ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರು ದೌಡಾಯಿಸಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ವಿವರ:
ಮೊದಲು ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಬಿಸಿ ಗಾಳಿ ಕಾಣಿಸಿಕೊಂಡಿತ್ತು. ಈ ಬಿಸಿಗಾಳಿಯನ್ನೇ ಬೆಂಕಿ ಎಂದು ಭಾವಿಸಿದ ಪ್ರಯಾಣಿಕರು ರೈಲಿನ ಚೈನ್ ಎಳೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಅಪಾಯದಿಂದ ಪಾರಾಗಲು ಪ್ರಯಾಣಿಕರು ರೈಲಿನಿಂದ ಕೆಳಕ್ಕೆ ಜಿಗಿದು ಮತ್ತೊಂದು ಹಳಿಗೆ ಬಿದ್ದಿದ್ದಾರೆ. ಈ ವೇಳೆಗಾಗಲೇ ಕರ್ನಾಟಕ ಎಕ್ಸ್ಪ್ರೆಸ್ ರೈಲು ಬಂದಿದ್ದು, ಹಳಿಯಲ್ಲಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಇದರಿಂದ ಈ ಘಟನೆ ಸಂಭವಿಸಿದೆ.
ಇನ್ನು ದೆಹಲಿಯಿಂದ ಬೆಂಗಳೂರಿಗೆ ಕರ್ನಾಟಕ ಎಕ್ಸ್ಪ್ರೆಸ್ ಬರುತ್ತಿದ್ದರೆ, ಪುಷ್ಪಕ್ ಎಕ್ಸ್ಪ್ರೆಸ್ ರೈಲು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಮುಂಬೈಗೆ ಬರುತ್ತಿತ್ತು.
ಘಟನೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸಾವನ್ನಪ್ಪಿರುವವರಲ್ಲಿ ಮುಂಬೈ ಮೂಲದವರೇ ಹೆಚ್ಚು ಎಂದು ಅಂದಾಜಿಸಲಾಗಿದೆ.