ಇಸ್ಲಾಮಾಬಾದ್ : ಕಾಶ್ಮೀರ ಸೇರಿದಂತೆ ಬಾಕಿ ಇರುವ ಎಲ್ಲಾ ವಿಷಯಗಳ ಕುರಿತು ಭಾರತದೊಂದಿಗೆ ಘನತೆ ಮತ್ತು ಗೌರವಯುತ ರೀತಿಯಲ್ಲಿ ಸಂಯೋಜಿತ ಮಾತುಕತೆಗೆ ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆ.
ತಮ್ಮ ದೇಶವು ಭಾರತದೊಂದಿಗೆ ಮಾತುಕತೆಗಾಗಿ ಬೇಡಿಕೊಳ್ಳುವುದಿಲ್ಲ ಎಂದು ಹೇಳಿದ್ದು, ಇಸ್ಲಾಮಾಬಾದ್ ಆಕ್ರಮಣಕ್ಕೆ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶೀರದ ಮರಳುವಿಕೆ ಮತ್ತು ಭಯೋತ್ಪಾದನೆಯ ವಿಷಯದ ಬಗ್ಗೆ ಮಾತ್ರ ಮಾತುಕತೆ ನಡೆಸುವುದು ಪಾಕಿಸ್ತಾನದೊಂದಿಗಿನ ಮಾತುಕತೆಯ ಕುರಿತ ಭಾರತದ ನಿಲುವಾಗಿದೆ.
೨೦೦೩ರಲ್ಲಿ ಜನರಲ್ ಪರ್ವೇಜ್ ಮುಷರಫ್ ಆಳ್ವಿಕೆಯಲ್ಲಿ ಪ್ರಾರಂಭಿಸಲಾದ ಸಂಯೋಜಿತ ಸಂವಾದವು, ೨೦೦೮ ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ೧೬೬ ಜನರು ಸಾವನ್ನಪ್ಪಿದ ನಂತರ ನಿಂತುಹೋಗಿತ್ತು. ಈ ಸಂವಾದವು ಎಂಟು ಘಟಕಗಳನ್ನು ಹೊಂದಿದ್ದು, ಎರಡೂ ದೇಶಗಳ ನಡುವಿನ ಎಲ್ಲಾ ವಿವಾದಾತಕ ವಿಷಯಗಳನ್ನು ಒಳಗೊಂಡಿದೆ. ಪಾಕಿಸ್ತಾನದ ಉಪ ಪ್ರಧಾನ ಮಂತ್ರಿಯೂ ಆಗಿರುವ ಇಶಾಕ್ ದಾರ್, ಯಾವುದೇ ಆಕ್ರಮಣ ನಡೆದರೆ ಭಾರತಕ್ಕೆ ಸಂಪೂರ್ಣ ಬಲದಿಂದ ಪ್ರತೀಕಾರ ತೀರಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಏಪ್ರಿಲ್ ೨೨ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೬ ಜನರು ಸಾವನ್ನಪ್ಪಿದ್ದಕ್ಕೆ ಪ್ರತಿಯಾಗಿ ಭಾರತ ಮೇ ೭ ರ ಮುಂಜಾನೆ ಆಪರೇಷನ್ ಸಿಂಧೂರ್ನಡಿ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರ ದಾಳಿ ನಡೆಸಿತ್ತು. ಪಿಒಜೆಕೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಒಂಬತ್ತು ಸ್ಥಳಗಳಲ್ಲಿ ಈ ದಾಳಿಗಳು ನಡೆದಿದ್ದು, ನೂರಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
ಸಂಘರ್ಷದ ಬಗ್ಗೆ ಮಾತನಾಡಿದ ದಾರ್, ಪಾಕಿಸ್ತಾನದ ನಿರೂಪಣೆಯನ್ನು ಜಾಗತಿಕ ಮಟ್ಟದಲ್ಲಿ ಪೂರ್ವಭಾವಿ ರಾಜತಾಂತ್ರಿಕತೆಯ ಮೂಲಕ ಅಂಗೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಭಾರತದೊಂದಿಗಿನ ಸಂಘರ್ಷದಲ್ಲಿ ಪಾಕಿಸ್ತಾನಿ ಪಡೆಗಳು ತಮ್ಮ ಪರಾಕ್ರಮವನ್ನು ಪ್ರದರ್ಶಿಸಿವೆ. ಯಾವುದೇ ಪ್ರಚೋದನೆಗೆ ಸಂಪೂರ್ಣವಾಗಿ ಪ್ರತಿಕ್ರಿಯಿಸುವುದಾಗಿ ಎಚ್ಚರಿಸಿದೆ. ಸಮುದ್ರದ ಮೂಲಕವೂ ಸಹ ಯಾವುದೇ ಆಕ್ರಮಣ ನಡೆದರೆ ಭಾರತಕ್ಕೆ ಸಂಪೂರ್ಣ ಬಲದಿಂದ ಪ್ರತಿಕ್ರಿಯಿಸಲು ಪಾಕಿಸ್ತಾನ ಸಿದ್ಧವಾಗಿದೆ ಎಂದು ಹೇಳಿದರು.




