Mysore
22
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಕೆರೆ ಅಭಿವೃದ್ಧಿಪಡಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು : ಹನೂರು ಶಾಸಕ ಮಂಜುನಾಥ್‌

ಹನೂರು : ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಾವರಿ ವ್ಯವಸ್ಥೆ ಕಲ್ಪಿಸುವುದರ ಮೂಲಕ ರೈತರಿಗೆ ವ್ಯವಸಾಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಎಂ ಆರ್ ಮಂಜುನಾಥ್ ತಿಳಿಸಿದರು.

ಹನೂರು ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು.

ಪಿ.ಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮೀಪದಲ್ಲಿ 16 ಎಕರೆ ಬೃಹತ್ ಕೆರೆಯಿದ್ದರು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರಿಂದ ಕೇವಲ ಒಂದು ಎಕರೆ ಪ್ರದೇಶದಲ್ಲಿ ಮಾತ್ರ ಮಳೆಯ ನೀರು ಸಂಗ್ರಹವಾಗುತ್ತಿತ್ತು. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿರಲಿಲ್ಲ. ಈ ಕೆರೆಯನ್ನು ಅಭಿವೃದ್ಧಿಪಡಿಸಿ ಉಡುತೊರೆ ಹಳ್ಳದಿಂದ ನೀರು ತುಂಬಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗಮನಕ್ಕೆ ತಂದಿದ್ದರು.

ಈ ನಿಟ್ಟಿನಲ್ಲಿ 40 ಲಕ್ಷ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸಲು ಪೈಪ್ ಲೈನ್ ಅನುದಾನ ನೀಡಲಾಗಿದೆ. ಇದಲ್ಲದೆ ಮಳೆಯ ನೀರು ಸಹ ಸಂಗ್ರಹವಾಗುವುದರಿಂದ ಸುಮಾರು ಎರಡು ಸಾವಿರ ಎಕರೆ ಜಮೀನುಗಳಿಗೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಇದಲ್ಲದೆ ಪಿಜಿ ಪಾಳ್ಯ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

ಕೆರೆಯ ಸುತ್ತಲೂ ಕಟ್ಟೆಗಳನ್ನು ನಿರ್ಮಾಣ ಮಾಡುವುದಲ್ಲದೆ ಸುಮಾರು 40 ಅಡಿಗಳಷ್ಟು ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಸಾರ್ವಜನಿಕರು ಸಹಾ ಮಳೆಗಾಲದಲ್ಲಿ ಬರುವ ನೀರು ಕೆರೆಗೆ ಸರಾಗವಾಗಿ ಹರಿದು ಬರುವಂತೆ ತಮ್ಮ ಜಮೀನುಗಳ ಬಳಿ ಹೂಳು ತೆಗೆದುಕೊಳ್ಳಬೇಕು. ಒಟ್ಟಾರೆ ಕೆರೆ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಮುಂದಿನ ದಿನಗಳಲ್ಲಿ ಲೊಕ್ಕನಹಳ್ಳಿ ವ್ಯಾಪ್ತಿಯಲ್ಲಿರುವ 10 ಎಕರೆ ಕೆರೆಯನ್ನು ಅಭಿವೃದ್ಧಿಪಡಿಸಿ ಈ ಗ್ರಾಮದ ಸುತ್ತಮುತ್ತಲಿನ ರೈತರಿಗೂ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಮಳೆಗಾಲದ ಸಂದರ್ಭದಲ್ಲಿಯೂ ಕೆರೆಗೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಒತ್ತುವರಿ ತೆರವು ಮಾಡಿ ಇನ್ನಷ್ಟು ನೀರು ಶೇಖರಣೆ ಮಾಡಲು ಕ್ರಮವಹಿಸಲಾಗುವುದು ಸಾರ್ವಜನಿಕರು ಸಹ ಕೆರೆಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬೆಳ್ಳುಳ್ಳಿ ಮಾರುಕಟ್ಟೆ ಪ್ರಾರಂಭ
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ರೈತರು ಹೆಚ್ಚಾಗಿ ಬೆಳ್ಳುಳ್ಳಿ ಬೆಳೆಯುತ್ತಿರುವುದರಿಂದ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಳ್ಳುಳ್ಳಿ ಮಾರುಕಟ್ಟೆ ಪ್ರಾರಂಭಿಸಲಾಗುವುದು ಪ್ರತಿಯೊಬ್ಬ ರೈತರು ಈ ಮಾರುಕಟ್ಟೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹನೂರು ಪಟ್ಟಣದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ಪ್ರತಿ ರಸ್ತೆಗಳಿಗೂ ಸಿಸಿ ರಸ್ತೆಯಾಗಿ ಮಾರ್ಪಡಿಸಿ ಅಭಿವೃದ್ಧಿ ಪಡಿಸಿದ ನಂತರ ಮಾರುಕಟ್ಟೆಯನ್ನು ಪ್ರಾರಂಭಿಸಲಾಗುವುದು ಹನೂರು ತಾಲೂಕಿನ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಆರ್ಥಿಕ ಸದೃಢರನ್ನಾಗಿ ಮಾಡಲು ಎಲ್ಲ ರೀತಿಯ ಕ್ರಮ ವಹಿಸಲಾಗುವುದು ಎಂದರು.

ಇದೆ ವೇಳೆ ಮುಖಂಡರಾದ ಬಿಳಿಗಿರಿ ಮಹದೇವಸ್ವಾಮಿ, ಜಿ ಎಂ ಮಾದೇಶ್, ನಿಂಗಶೆಟ್ಟಿ , ಜಡೇರುದ್ರಸ್ವಾಮಿ, ಕೃಷ್ಣಮೂರ್ತಿ, ಸಿದ್ದರಾಜು, ಚಿಕ್ಕರಾಜಶೆಟ್ಟಿ, ಚಿನ್ನಸ್ವಾಮಿ, ಬೇಕ್ರಿ ಶಿವಕುಮಾರ್, ಸೆಲ್ವಂ, ಮಹೇಂದ್ರ,ರವಿ ಸಣ್ಣಮಾದ,ಸೋಮಶೇಖರ್, ನಾಗೇಂದ್ರ,ಮಧುಸೂದನ್, ಎಂ ಎಸ್ ಸಿ ಮಹದೇಸ್ವಾಮಿ,ಡಿ ಕೆ ರಾಜು,ನಾಗರಾಜು, ಪುನೀತ್,ಉದ್ದನೂರು ಶಾಂತಣ್ಣ,ಗಿರೀಶ್, ಪ್ರಮೋದ್, ನಟರಾಜು,ವೆಂಕಟೇಶ್,ಗೋವಿಂದ, ವಿಜಯ್ ಕುಮಾರ್, ನಟರಾಜು,ಪ್ರಭುಸ್ವಾಮಿ, ಸೇರಿದಂತೆ ಇನ್ನಿತರರು ಹಾಜರಿದ್ದರು.

 

Tags:
error: Content is protected !!