ಹೊಸದಿಲ್ಲಿ : ಪಹಲ್ಗಾಮ್ನ ಘಟನೆಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಯಾವುದೇ ಸಂದರ್ಭದಲ್ಲೂ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸೇನಾ ಪಡೆಯನ್ನು ಹೈಅಲರ್ಟ್ನಲ್ಲಿ ಇಡಲಾಗಿದೆ.
ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕೆಂದು ಮೂರು ಸೇನಾ ಪಡೆಗಳ ಮುಖ್ಯಸ್ಥರಿಗೆ ರಕ್ಷಣಾ ಇಲಾಖೆ ಮೌಖಿಕ ಸೂಚನೆ ಕೊಟ್ಟಿದೆ.
ಪಾಕಿಸ್ತಾನದಿಂದ ಸಂಭಾವ್ಯ ದಾಳಿ ನಡೆಯಬಹುದೆಂಬ ಗುಪ್ತಚರ ವಿಭಾಗ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಸೇನಾಪಡೆಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ.
ಭಾರತೀಯ ವಾಯುಸೇನೆ ದೇಶದ ಎಲ್ಲಾ ಕರಾವಳಿ ತೀರಪ್ರದೇಶಗಳಲ್ಲೂ ಸಮರ ಅಭ್ಯಾಸವನ್ನು ನಡೆಸುತ್ತಿದೆ. ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಸೇರಿದಂತೆ ಕರಾವಳಿ ತೀರಪ್ರದೇಶಗಳಲ್ಲಿ ಭಾರತೀಯ ಸೇನಾಪಡೆಗೆ ಸೇರಿದ ವಾಯುಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.
ಕಳೆದ ಎರಡು ದಿನಗಳಿಂದ ವಾಯುಸೇನೆಯು ನಿರಂತರವಾಗಿ ಸಮರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇದೇ ರೀತಿ ಭಾರತೀಯ ನೌಕಾ ಪಡೆಯು ಕೂಡ ಸಮರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ.
ವಿಶೇಷವಾಗಿ ಮುಂಬೈ, ಕೊಚ್ಚಿ, ಕಾರವಾರ, ಪಣಜಿ ಮತ್ತಿತರ ಕಡೆ ಸಮರಾಭ್ಯಾಸ ನಡೆಸುತ್ತಿವೆ. ಪೂರ್ವ, ಪಶ್ಚಿಮ ಸೇರಿದಂತೆ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿತೀರ ಪ್ರದೇಶಗಳಲ್ಲಿ ನೌಕಾ ನೆಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.
ಪಾಕಿಸ್ತಾನವು ಕರಾಚಿ ಮತ್ತು ಗುಜರಾತ್ ಕಡೆಯಿಂದ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಶಂಕಿಸಿದೆ. ಹೀಗಾಗಿ ಈ ತೀರ ಪ್ರದೇಶಗಳಲ್ಲಿ ಗುರುವಾರದಿಂದಲೇ ಹೈಅಲರ್ಟ್ ಘೋಷಿಸಲಾಗಿದೆ.
ಇದೇ ರೀತಿ ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನಗಳನ್ನು ಸಹ ಸನ್ನದ್ದದಲ್ಲಿ ಇಡಲಾಗಿದೆ. ಗುರುವಾರ ಪಾಕಿಸ್ತಾನದ ಕರಾಚಿಯ ಅರಬ್ಬಿ ಸಮುದ್ರದಲ್ಲಿ 480 ಕಿ.ಮೀ.ನಿಂದ 500 ಕಿ.ಮೀ ಗುರಿ ತಲುಪುವ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು.
ಹೀಗಾಗಿ ವಾಯುಪಡೆಯ ಯುದ್ಧ ವಿಮಾನಗಳಾದ ತೇಜಸ್, ರಫೇಲ್, ಸುಖೋಯ್, ನೇತ್ರ, ಸಿ17 ಗ್ಲೋಬ್ ಮಾಸ್ಟರ್, ಸಿ295, ಎಸ್ಎಚ್748, ಪ್ರಚಂಡ್, ಡೆಸಾಲ್ಟ, ನಿಕೋಯ್, ಜಾಗ್ವಾರ್, ಬೋಯಿಂಗ್, ರುದ್ರ, ಚಿನೂಕ್, ಧ್ರುವ, ಹಾಕ್, ಕಿರಣ್ ಸೇರಿದಂತೆ ಬಹುತೇಕ ಎಲ್ಲಾ ಯುದ್ಧ ವಿಮಾನಗಳು ಸಜ್ಜುಗೊಂಡಿವೆ.
ಈಗಾಗಲೇ ಒಂದು ಸುತ್ತಿನ ಸಮರ ಅಭ್ಯಾಸವನ್ನು ನಡೆಸಿರುವ ಈ ಯುದ್ಧ ವಿಮಾನಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ.
ಪ್ರಸ್ತುತ ಭಾರತದಲ್ಲಿ 60 ವಾಯುಪಡೆ ನೆಲೆಗಳಿವೆ. ನವದೆಹಲಿ, ಶಿಲ್ಲಾಂಗ್, ಪ್ರಯಾಗ್ರಾಜ್, ತಿರುವನಂತಪುರಂ, ಗಾಂಧಿನಗರ, ಬೆಂಗಳೂರಿನ ಯಲಹಂಕ, ನಾಗ್ಪುರ್, ಹಿಂಡನ್ ಸೇರಿದಂತೆ 60 ಕೇಂದ್ರಗಳಲ್ಲೂ ಕೂಡ ಯುದ್ಧ ವಿಮಾನಗಳನ್ನು ಇರಿಸಲಾಗಿದೆ.
ಇವುಗಳನ್ನು ವೆಸ್ಟರ್ನ್ ಎ ಕಮಾಂಡ್, ಈಸ್ಟರ್ನ್ ಎ ಕಮಾಂಡ್, ಸೌಥರ್ನ್ ಎ ಕಮಾಂಡ್, ನಾಥರ್ನ್ ಎ ಕಮಾಂಡ್ ಹಾಗೂ ನೈರುತ್ಯ ವಿಭಾಗ ಎಂದು ವಿಂಗಡಿಸಲಾಗಿದೆ.
ಪಾಕಿಸ್ತಾನ ಪ್ರಚೋದನೆಕಾರಿಯಾಗಿ ದಾಳಿ ನಡೆಸಿದರೆ ಅದರ ಪ್ರತಿರೋಧವನ್ನು ಹಿಮೆಟ್ಟಿಸಿ ತಕ್ಕ ಪಾಠ ಕಲಿಸಬೇಕೆಂದು ಸೇನಾಪಡೆ ಮೌಖಿಕ ಸೂಚನೆಯನ್ನು ನೀಡಿದೆ ಎಂದು ತಿಳಿದು ಬಂದಿದೆ.





