Mysore
25
overcast clouds
Light
Dark

ಮುಂಬೈ ಸರಣಿ ಸ್ಫೋಟದ ಅಪರಾಧಿ ಮೊಹಮ್ಮದ ಅಲಿಖಾನ್‌ ಹತ್ಯೆ

ಮುಂಬೈ:  1993ರ ಬಾಂಬೆ ಸರಣಿ ಸ್ಫೋಟದ ಆರೋಪಿ ಮೊಹಮದ್ ಅಲಿಖಾನ್‍ನನ್ನು ಭಾನುವಾರ(ಜೂ.2) ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದ ಜೈಲಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳು ಕೊಲೆ ಮಾಡಿದ್ದಾರೆ. ಈ ಆರೋಪಿಗಳು ಮೊಹಮದ್ ಅಲಿಖಾನ್‍ರ ಶಿರಚ್ಛೇದ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪ್ರತೀಕ್ ಪಾಟೀಲ್, ದೀಪಕ್ ಖೋಟ್, ಸಂದೀಪ್ ಚವ್‍ಹಾಣ್, ರಿತುರಾಜ್ ಇನಾಮದಾರ್ ಮತ್ತು ಸೌರಭ್‍ಸಿದ್ಧ ಎಂಬುವ ಖೈದಿಗಳೇ ಮೊಹಮ್ಮದ ಅಲಿಖಾನ್‌ನನ್ನು ಹತ್ಯೆ ಮಾಡಿರುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆ ವಿವರ
ಮೊಹಮದ್ ಅಲಿಖಾನ್ ಇದ್ದ ಬ್ಯಾರಕ್‌ನಲ್ಲಿಯೇ,  ಇನ್ನೊಂದು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಐವರು ಆರೋಪಿಗಳನ್ನು  ಇರಿಸಲಾಗಿತ್ತು.

ಮೃತ ಮೊಹಮದ್ ಅಲಿ ಖಾನ್ ಸೇರಿದಂತೆ ಈ ಎಲ್ಲಾ ಆರೋಪಿಗಳು ಒಂದೇ ಬ್ಯಾರಕ್‍ನಲ್ಲಿ ಇದ್ದರು. ಇದರಿಂದಾಗಿ ಅವರ ನಡುವೆ ಏನಾದರೂ ಜಗಳವಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲ್ಲಾಪುರ ಜೈಲಿನಲ್ಲಿರುವ ಮುಂಬೈ ಸ್ಫೋಟದ ಇತರ ಆರೋಪಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜೈಲಿನೊಳಗೆ ನಡೆದ ಈ ಹತ್ಯೆಗೆ ಪ್ರಮುಖ ಕಾರಣ ಏನು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಜೈಲು ಇಲಾಖೆಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಸ್ವಾತಿ ಸಾಠೆ ಮಾಹಿತಿ ನೀಡಿದ್ದಾರೆ.

ಯಾರು ಈ ಮೊಹಮ್ಮದ್‌ ಅಲಿಖಾನ್‌
ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಮೊಹಮದ್ ಅಲಿಖಾನ್ ಅಲಿಯಾಸ್ ಮುನ್ನಾ ಅಲಿಯಾಸ್ ಮನೋಜ್‍ಕುಮಾರ್ ಭನ್ವರ್‍ಲಾಲ್ ಗುಪ್ತಾ ಕೋಲ್ಹಾಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಐವರು ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. 1993ರ ಮಾರ್ಚ್ 12ರಂದು ಬಾಂಬೆ ಸ್ಟಾಕ್ ಎಕ್ಸ್‌ ಚೆಂಜ್ 28 ಅಂತಸ್ತಿನ ಕಟ್ಟಡದ ನೆಲಮಾಳಿಗೆಯಲ್ಲಿ ಸಂಭವಿಸಿದ ಬೃಹತ್ ಸ್ಫೋಟದಲ್ಲಿ 50 ಜನರು ಸಾವನ್ನಪ್ಪಿದರು. ಅರ್ಧ ಗಂಟೆಯ ನಂತರ ಕಾರಿನಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು ಮತ್ತು ಒಂದರ ನಂತರ ಒಂದರಂತೆ ಸರಣಿ ಸ್ಫೋಟಗಳು ಪ್ರಾರಂಭವಾದವು. ಎರಡು ಗಂಟೆಗಳಲ್ಲಿ ಮುಂಬೈನ 12 ಸ್ಥಳಗಳಲ್ಲಿ 13 ಸ್ಫೋಟಗಳು ಸಂಭವಿಸಿವೆ. ಈ ಸರಣಿ ಸ್ಫೋಟಗಳಲ್ಲಿ 257 ಜನರು ಸಾವನ್ನಪ್ಪಿದ್ದರು ಮತ್ತು 713 ಜನರು ಗಾಯಗೊಂಡಿದ್ದರು.