ಗುವಾಹಟಿ: ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಮಾನವ-ಆನೆಗಳ ನಡುವಿನ ಸಂಘರ್ಷ ತಡೆಗಟ್ಟಲು ಅಲ್ಲಿನ ಜನರು ʼಆನೆಗಳ ಸ್ನೇಹಿತರುʼ (ಹಾಥಿ ಬಂಧು) ಎಂಬ ಹೆಸರಿನಲ್ಲಿ ವಿನೂತನ ದಾರಿ ಕಂಡುಕೊಂಡಿರುವುದನ್ನು ʼಮನದ ಮಾತುʼ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.
ವಿವಿಧ ಹುಲ್ಲನ್ನು ಬೆಳೆದು ಆನೆಗಳ ಹಾವಳಿ ತಪ್ಪಿಸುವ ಈ ವಿನೂತನ ಕಾರ್ಯದ ಆಡಿಯೊ ಕ್ಲಿಪ್ ಅನ್ನು ʼಎಕ್ಸ್ʼ ನಲ್ಲಿ ಹಂಚಿಕೊಂಡಿರುವ ಮೋದಿ ಅವರು, ನಗಾಂವ್ ಜಿಲ್ಲೆಯ ಪ್ರಯತ್ನವು ಪ್ರತಿಯೊಬ್ಬರನ್ನೂ ಪ್ರೇರೇಪಿಸುವ ಶಕ್ತಿ ಹೊಂದಿದೆ ಎಂದು ಹೇಳಿದ್ದಾರೆ.
ನಗಾಂವ್ ಜಿಲ್ಲೆಯಲ್ಲಿ ನಿರಂತರವಾಗಿ ಮಾನವ-ಆನೆ ಸಂಘರ್ಷ ನಡೆಯುತ್ತಿತ್ತು. ಇದರಿಂದ ಕಂಗಲಾಗಿದ್ದ ಗ್ರಾಮಸ್ಥರು ʼಹಾಥಿ ಬಂಧುʼ ಹೆಸರಿನಲ್ಲಿ ವಿನೂತನ ಹೆಜ್ಜೆ ಇಟ್ಟಿದ್ದಾರೆ. ಗ್ರಾಮಸ್ಥರೆಲ್ಲ ಒಗ್ಗೂಡಿ 264 ಎಕರೆ ಬರಡು ಭೂಮಿಯಲ್ಲಿ ಮೇವಿನ ಹುಲ್ಲು (ನೇಪಿಯರ್ ಹುಲ್ಲು) ಬೆಳೆಯುವ ಮೂಲಕ ಆಹಾರ ಅರಸಿ ಗ್ರಾಮಗಳಿಗೆ ಬರುತ್ತಿದ್ದ ಆನೆಗಳಿಗೆ ಕಡಿವಾಣ ಹಾಕಿದ್ದಾರೆ.
ಇದರಿಂದ ಕೃಷಿ ಭೂಮಿಗೆ ಆನೆಗಳು ಲಗ್ಗೆ ಇಡುವುದು ಕಡಿಮೆ ಆಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ ಎಂದು ತಿಳಿಸಿದ್ದಾರೆ.