ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ ಮುಂದಾಗಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದ್ದಾರೆ.
ಸಂಸತ್ ಕಲಾಪದಲ್ಲಿ ನಡೆದ ಕಲಾಪದ ಚರ್ಚೆಯಲ್ಲಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಮೈಸೂರು ಸೇರಿದಂತೆ ಭಾರತದ ಪಾರಂಪರಿಕ ನಗರಗಳು ಈಗ ಸಾಕಷ್ಟು ಆತಂಕ ಎದುರಿಸುತ್ತಿವೆ. ಅನಿಯಂತ್ರಿತ, ಅವೈಜ್ಞಾನಿಕ ನಗರೀಕರಣದಿಂದ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
ಈ ಮೂಲಕ ಪಾರಂಪರಿಕತೆ ಬೆಳೆಸಲು ಸೂಕ್ತವಾಗಿ ಕಾನೂನು ಚೌಕಟ್ಟು, ನೀತಿ ರೂಪಿಸಲು ನಗರಾಭಿವೃದ್ಧಿ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಖಾಸಗಿ ಪಾಲುದಾರಿಕೆಯಲ್ಲಿ ಪರಿಣಾಮಕಾರಿ ಪಾರಂಪರಿಕ ಸಂರಕ್ಷಣೆ, ಡಿಜಿಟಲ್ ಮ್ಯಾಪಿಂಗ್, ನಗರ ವಸಾಹತು, ನಾಗರಿಕತೆ ಸಂರಕ್ಷಣೆ ಮಾಡಬೇಕಿದೆ. ನಮ್ಮ ಸಂಸ್ಕೃತಿ, ಸ್ಮರಣೆ, ಭಂಡಾರಗಳನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಆಗ್ರಹಿಸಿದರು.





