Mysore
19
scattered clouds

Social Media

ಬುಧವಾರ, 04 ಫೆಬ್ರವರಿ 2026
Light
Dark

ಸಂಸತ್‌ನಲ್ಲಿ ರಾಹುಲ್‌ ಗಾಂಧಿ ಭಾಷಣಕ್ಕೆ ಕತ್ತರಿ, ವಿವಾದಾತ್ಮಕ ಮಾತುಗಳನ್ನು ಕಲಾಪದಿಂದ ತೆಗೆಯಲು ಸ್ಪೀಕರ್‌ ಸೂಚನೆ

ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಬಗ್ಗೆ ವಿವಾದಾತ್ಮಕ ಮಾತುಗಳನ್ನಾಡಿರುವ ಕಾರಣ ಅವರ ಭಾಷಣವನ್ನು ಕಲಾಪದಿಂದ ತೆಗೆಯುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚನೆ ನೀಡಿದ್ದಾರೆ.

ಲೋಕಸಭೆ ಸಚಿವಾಲಯದ ಪತ್ರಿಕಾ ಮತ್ತು ಸಾರ್ವಜನಿಕ ಸಂಪರ್ಕ ಶಾಖೆಯ ಜಂಟಿ ನಿರ್ದೇಶಕ ಬೈಕುಂಠನಾಥ ಮಹಾಪಾತ್ರ ಅವರು ಪತ್ರವೊಂದನ್ನು ಹೊರಡಿಸಿ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಯ್‌ ಬರೇಲಿ ಸಂಸದ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ಚರ್ಚೆಯಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಇಂತಹ ಹಲವು ವಿಷಯಗಳನ್ನು ಹೇಳಿದ್ದು ಆಡಳಿತ ಪಕ್ಷ ಅದರಲ್ಲೂ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಎರಡು ಬಾರಿ ಪ್ರಧಾನಿ ಮೋದಿ ತಮ್ಮ ಆಸನದಿಂದ ಎದ್ದು ಉತ್ತರಿಸಬೇಕಾಯಿತು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ರಾಹುಲ್‌ ಭಾಷಣಕ್ಕೂ ಎನ್‌ಡಿಎ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್‌ ಓಂ ಬಿರ್ಲಾ ಅವರೇ ಎಚ್ಚರಿಕೆಯಿಂದ ಮಾತನಾಡುವಂತೆ ಒತ್ತಾಯಿಸಿದ್ದರು. ಹಿಂದೂಗಳ ಕುರಿತ ಅವರ ಹೇಳಿಕೆ ಸೇರಿದಂತೆ ಭಾಷಣದ ಕೆಲವು ಭಾಗಗಳನ್ನು ಈಗ ಸದನದ ಕಲಾಪದಿಂದ ತೆಗೆದುಹಾಕಲಾಗಿದೆ. ರಾಹುಲ್‌ ಗಾಂಧಿ ಅವರ ವಿವಾದಾತ್ಮಕ ಭಾಷಣದ ಕೆಲವು ಸಾಲುಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ಅವರ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಜೆ.ಪಿ.ನಡ್ಡಾ, ಅಶ್ವಿನಿ ವೈಷ್ಣವ್‌ ಮತ್ತು ಎನ್‌ಡಿಎ ನಾಯಕ ಚಿರಾಗ್‌ ಪಾಸ್ವಾನ್‌ ಸೇರಿದಂತೆ ಆಡಳಿತ ಪಕ್ಷದ ಅನೇಕ ಸಂಸದರು ರಾಹುಲ್‌ ಕ್ಷಮೆಯಾಚಿಸುವಂತೆ ಕೇಳಿಕೊಂಡರು. ರಾಹುಲ್‌ ಭಾಷಣದ ವೇಳೆ ಹಲವು ಬಾರಿ ರಾಜನಾಥ್‌ ಸಿಂಗ್‌, ಪ್ರಧಾನಿ ಮೋದಿ, ಕಿರಣ್‌ ರಿಜಿಜು ತಮ್ಮ ಆಸನಗಳಿಂದ ಎದ್ದು ರಾಹುಲ್‌ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ನಾಯಕರು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಆರೋಪಿಸಿದ್ದರು. ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ಮಾತ್ರ ಇಡೀ ಹಿಂದೂ ಸಮುದಾಯವಲ್ಲ ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದರು.

ಭಾರತದ ಪರಿಕಲ್ಪನೆ, ಸಂವಿಧಾನ, ಸಂವಿಧಾನದ ಮೇಲಿನ ದಾಳಿಯನ್ನು ತಡೆಯಲು ಮುಂದಾದವರ ಮೇಲೆ ವ್ಯವಸ್ಥಿತ ಪೂರ್ಣ ಪ್ರಮಾಣದ ದಾಳಿಗಳು ನಡೆದಿವೆ ಎಂದು ರಾಹುಲ್‌ ಗಾಂಧಿ ಸದನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು.

ಗುರುನಾನಕ್‌, ಬುದ್ಧ, ಮಹಾವೀರ ಸೇರಿದಂತೆ ಭಾರತದಲ್ಲಿ ಯಾವುದೇ ಮಹಾಪುರುಷನನ್ನು ನೋಡಿದರೂ ಅವರೆಲ್ಲರೂ ಅಹಿಂಸೆಯನ್ನು ಬೋಧಿಸಿದರು. ಹಿಂಸೆಯನ್ನು ವಿರೋಧಿಸಿದವರಾಗಿದ್ದಾರೆ. ಆದರೆ ಕೇಂದ್ರ ಸರ್ಕಾದಲ್ಲಿರುವ ಹಿಂದೂಗಳೆಂದು ಕರೆದುಕೊಳ್ಳುವವರು ಹಿಂದೂ ಧರ್ಮದ ಮೂಲಭೂತವಾದ ಅಂಶ ಅಹಿಂಸೆಗೆ ವಿರುದ್ಧವಾಗಿ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಪ್ರಧಾನಿ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಕಟುವಾದ ಮಾತುಗಳನ್ನಾಡಿದ್ದಾರೆ.

Tags:
error: Content is protected !!