ನವದೆಹಲಿ: ಎಎಪಿ ಪಕ್ಷವು ಎರಡನೇ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಾಗಿ ಮಹಿಳೆಯರನ್ನು ಓಲೈಸುವ ಯೋಜನೆ ಜಾರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿ ಮಹಿಳೆಯರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ ಎಂದು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
ಓಕ್ಲಾ ಮತ್ತು ರೋಹಿಣಿಯಲ್ಲಿ ಚುನಾವಣೆ ನಿಮಿತ್ತ ನಡೆದ ಸಮಾವೇಶಗಳಲ್ಲಿ ಮಾತನಾಡಿದ ಅವರು, ಫೆಬ್ರವರಿ.5ರಂದು ನಡೆಯುವ ಚುನಾವಣೆಯಲ್ಲಿ ಕಮಲದ ಗುರುತನ್ನು ಒತ್ತುವ ಮೂಲಕ ಬಿಜೆಪಿ ಪಕ್ಷ ಗೆಲ್ಲಿಸಿ. ಎಎಪಿ ಪಕ್ಷವನ್ನು ದೆಹಲಿಯಿಂದ ಎತ್ತಂಗಡಿ ಮಾಡಬೇಕು ಎಂದು ಮನವಿ ಮಾಡಿದರು.
ಎಎಪಿ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2100 ರೂ. ನೀಡುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿರುವ ʼಮಹಿಳಾ ಸಮ್ಮಾನ್ ಯೋಜನೆʼ ಯಡಿ ನೋಂದಣಿ ಮಾಡಿಕೊಳ್ಳುವ ಮಹಿಳೆಯರ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತಿದೆ. ಇದು ಸ್ತ್ರೀಯರ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ ಎಂದು ಇರಾನಿ ಆತಂಕ ವ್ಯಕ್ತಪಡಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಸರ್ಕಾರ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ. ಆದ ಕಾರಣ ಈ ಬಾರಿ ಎಎಪಿ ಪಕ್ಷವನ್ನು ಸೋಲಿಸಿ ನಮ್ಮ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.