ಮೈಸೂರು : ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮೈಸೂರಿನ ಶಿಕ್ಷಕ ಮಧುಸೂದನ್ ಕೆ.ಎಸ್ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರಸ್ತುತ ಮೈಸೂರು ಜಿಲ್ಲೆ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ವಿಜ್ಞಾನ ಶಿಕ್ಷಕರಾಗಿ ಮಧುಸೂದನ್ ಕೆ.ಎಸ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟಂಬರ್ 5 ಶಿಕ್ಷಕರ ದಿನಾಚಾರಣೆಯಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಮಧುಸೂದನ್ ಕೆ.ಎಸ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಧುಸೂದನ್ ಕೆ.ಎಸ್ ಅವರು ಕೆ.ಆರ್ ನಗರದ ನಿವಾಸಿಯಾಗಿದ್ದು 2008ರಲ್ಲಿ ಶಿಕ್ಷಕರಾಗಿ ಆಯ್ಕೆಯಾಗಿ ಕೆಆರ್ ನಗರ ತಾಲ್ಲೂಕಿನ ಎರೆಮುದ್ದನಹಳ್ಳಿಯಲ್ಲಿ ಸೇವೆ ಆರಂಭಿಸಿದರು. ನಂತರ ಮುದ್ದನಹಳ್ಳಿಯಲ್ಲಿ ಶಿಕ್ಷಕರಾಗಿ ಬಳಿಕ ಭೇರ್ಯ ಸಿಆರ್ ಪಿ ಆಗಿ ಕರ್ತವ್ಯ ನಿರ್ವಹಿಸಿದ್ದು ನಂತರ ಪ್ರಸ್ತುತ ಹಿನಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಧುಸೂದನ್ ಅವರು ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿಗೂ ಕೂಡ ಭಾಜನರಾಗಿದ್ದರು.





