Mysore
29
overcast clouds

Social Media

ಸೋಮವಾರ, 29 ಜೂನ್ 2026
Light
Dark

ಮೈಸೂರು | ವ್ಯಕ್ತಿ ಅನುಮಾನಾಸ್ಪದ ಸಾವು ; ಹೆಂಡತಿಯಿಂದಲೇ ಕೊಲೆಯ ಶಂಕೆ

ಮೈಸೂರು : ಇಲ್ಲಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾವಿನ ಪ್ರಕರಣ ಕೊಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ ಅವರೇ ಗಂಡನನ್ನು ಹತ್ಯೆ ಮಾಡಿರುವುದು ಎಂದು ಪೊಲೀಸರು ಶಂಕಿಸಿದ್ದಾರೆ.

50 ವರ್ಷದ ನಿತ್ಯಾನಂದ ಅವರು ಖಾಸಗಿ ಮಹೀಂದ್ರಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸುಶೀಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ. ಸಾಂಸಾರಿಕ ಕಲಹ, ಹಣಕಾಸು ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ನಿತ್ಯಾನಂದ ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದರು. ಶನಿವಾರ ರಾತ್ರಿ ಕೂಡ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ತೆರಳಿದ್ದರು. ಬಳಿಕ ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಪತ್ನಿ ಸುಶೀಲ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ಬಳಿಕ ಘಟನೆಗೆ ಹೃದಯಾಘಾತದ ಬಣ್ಣ ನೀಡಲು ಸುಶೀಲ ಯತ್ನಿಸಿದ್ದಾಳೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನಿತ್ಯಾನಂದ ಅವರ ಸ್ನೇಹಿತ ದರ್ಶನ್ ಹಲವು ಬಾರಿ ಕರೆ ಮಾಡಿದ್ದರು. ಕರೆಗಳಿಗೆ ಸಮರ್ಪಕ ಉತ್ತರ ಸಿಗದ ಕಾರಣ ಅವರು ಮನೆ ಬಳಿ ಬಂದು ಬಾಗಿಲು ತಟ್ಟಿದರೂ ಸುಶೀಲ ಬಾಗಿಲು ತೆರೆಯಲಿಲ್ಲ ಎಂದು ತಿಳಿದುಬಂದಿದೆ.

ಬಳಿಕ ಸುಶೀಲ ಅವರು ನಿತ್ಯಾನಂದ ಅವರ ಅಣ್ಣನಿಗೆ ಕರೆ ಮಾಡಿ, “ನಿಮ್ಮ ತಮ್ಮನಿಗೆ ಹೃದಯಾಘಾತವಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಗೆ ಆಗಮಿಸಿದ ನಿತ್ಯಾನಂದ ಅವರ ಅಣ್ಣ ಮೃತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ. ಇದರಿಂದ ಅನುಮಾನಗೊಂಡ ಅವರು ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸುಶೀಲ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಕೊಲೆ ಮಾಡಿರುವ ವಿಚಾರವನ್ನು ಸುಶೀಲ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಮುಂದಿನ ತನಿಖೆಯ ಬಳಿಕ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Tags:
error: Content is protected !!