Mysore
29
thunderstorm

Social Media

ಬುಧವಾರ, 18 ಮಾರ್ಚ್ 2026
Light
Dark

ಸೆಸ್ಕ್‌ ಅಧಿಕಾರಿಗಳು, ಸಿಬ್ಬಂದಿಗೆ ಉಚಿತ ಶ್ರವಣ ಪರೀಕ್ಷೆ 

ನಿಗಮ ಕಚೇರಿಯಲ್ಲಿ ಎರಡು ದಿನಗಳ ಶಿಬಿರ ಆಯೋಜನೆ

ಮೈಸೂರು : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ನಿಗಮದ ವತಿಯಿಂದ ಉಚಿತ ಶ್ರವಣ ಪರೀಕ್ಷೆ ಶಿಬಿರ ನಡೆಸಲಾಗುತ್ತಿದೆ.

ಸೆಸ್ಕ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಫೋಕಸ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌ ಕ್ಲಿನಿಕ್‌ ಸಹಯೋಗದಲ್ಲಿ ಸೆಸ್ಕ್ ಆಯೋಜಿಸಿರುವ ಎರಡು ದಿನಗಳ ಶಿಬಿರಕ್ಕೆ ಶಾಸಕರೂ ಆಗಿರುವ ನಿಗಮದ ಅಧ್ಯಕ್ಷ ರಮೇಶ್‌ ಬಂಡಿಸಿದ್ದೇಗೌಡ ಹಾಗೂ ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್‌ ರಾಜು ಅವರು ಚಾಲನೆ ನೀಡಿದರು.

ದಿನವಿಡೀ ನಡೆದ ಶಿಬಿರದಲ್ಲಿ ಸೆಸ್ಕ್‌ ಪ್ರಧಾನ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆ ಹಾಗೂ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಡೇಟಾ ಎಂಟ್ರಿ ಸಿಬ್ಬಂದಿ, ವಾಹನ ಚಾಲಕರುಗಳು, ನಿಗಮ ಕಚೇರಿಯ ಸಹಾಯಕ ಸಿಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ಶ್ರವಣ ದೋಷದ ಪರೀಕ್ಷೆ ಮಾಡಿಸಿಕೊಂಡು, ಅಗತ್ಯ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆದುಕೊಂಡರು.

ಶಿಬಿರದಲ್ಲಿ ಫೋಕಸ್‌ ಸ್ಪೀಚ್‌ ಅಂಡ್‌ ಹಿಯರಿಂಗ್‌ ಕ್ಲಿನಿಕ್‌ನ ಆಡಿಯೋಲಜಿಸ್ಟ್‌ ಎ.ಕುಶಾಲ್‌ ಕುಮಾರ್‌ ಹಾಗೂ ಆಡಿಯೋಲಜಿಸ್ಟ್‌ ಹಾಗೂ ಸ್ಪೀಚ್‌ ಥೆರಪಿಸ್ಟ್‌ ಎ.ಕೃತಿಕಾ ಅವರುಗಳು ಶ್ರವಣ ಪರೀಕ್ಷೆ ನಡೆಸಿದರು.

“ಸೆಸ್ಕ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಆರೋಗ್ಯದ ಬಗ್ಗೆ ಸೆಸ್ಕ್‌ ಹೆಚ್ಚಿನ ಕಾಳಜಿ ವಹಿಸುತ್ತಾ ಬಂದಿದೆ. ಇದಕ್ಕಾಗಿ ಸಿಬ್ಬಂದಿಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಈಗಾಗಲೇ ಕ್ಯಾಶ್ ಲೆಸ್ ಹೆಲ್ತ್ ಕಾರ್ಡ್ ನೀಡಲಾಗಿದೆ. ಇದರ ಜತೆಗೆ ಇತ್ತೀಚೆಗೆ ಸೆಸ್ಕ್ ನಿಗಮ ಕಚೇರಿ ಸಿಬ್ಬಂದಿ, ಹೊರ ಗುತ್ತಿಗೆ ನೌಕರರಿಗೆ ಆರೋಗ್ಯ ತಪಾಸಣೆ ಸಹ ನಡೆಸಲಾಗಿದೆ. ಪ್ರತಿಯೊಬ್ಬ ನೌಕರರು ಇಂತಹ ಕಾರ್ಯಕ್ರಮಗಳ ಉಪಯೋಗ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ರಾಜು ಹೇಳಿದರು.

Tags:
error: Content is protected !!