ಮೈಸೂರು: ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆ ತೆರವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವಿಚಾರ ಸಂಬಂಧ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇದೆ. ನ್ಯಾಯಾಲಯದ ತೀರ್ಪಿಗೆ ನಾವು ಬದ್ಧ ಎಂದು ದೇವರಾಜ ಮಾರುಕಟ್ಟೆ ಸಂಘದ ಅಧ್ಯಕ್ಷ ಮಹದೇವ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ಇದೆ. ನ್ಯಾಯಾಲಯ ಯಾವುದೇ ತೀರ್ಪು ನೀಡಿದರು ಅದಕ್ಕೆ ಸ್ವಾಗತ ಮಾಡುತ್ತೇವೆ ಎಂದರು.
ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವಾಗಿದೆ. ಇದನ್ನು ನವೀಕರಣ ಮಾಡಬೇಕು ಎನ್ನುವುದು ನಮ್ಮ ಆಶಯ. ಇಡೀ ಕಟ್ಟಡ ಶಿಥಿಲಗೊಂಡಿಲ್ಲ. ಎಲ್ಲಿ ಶಿಥಿಲ ಆಗಿದೆಯೋ ಅಲ್ಲಿ ನವೀಕರಣ ಮಾಡಬಹುದು ಎಂದು ಹೇಳಿದರು.
2016ರಲ್ಲಿ ಒಂದು ಭಾಗದಲ್ಲಿ ಕಟ್ಟಡ ಕುಸಿಯಿತು. ಕಟ್ಟಡ ಶಿಥಿಲಗೊಂಡಿದೆ ಎಂದು ಬಿಂಬಿಸಲು ಬೇಕಂತಲೇ ಅದನ್ನು ಬೀಳಿಸಲಾಗಿದೆ. ತಜ್ಞರ ಆಯೋಗ ಪರಿಶೀಲಿಸಿ ಕಟ್ಟಡ ಸುಸ್ಥಿತಿಯಲ್ಲಿದೆ ಎಂದು ವರದಿ ನೀಡಿದೆ. ಅದನ್ನು ಕೂಡ ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡು ಸಕರಾತ್ಮಕ ತೀರ್ಪು ನೀಡುವ ಭರವಸೆ ಇದೆ. ನ್ಯಾಯಾಲಯ ಏನೇ ತೀರ್ಪು ನೀಡಿದರೂ ಅದಕ್ಕೆ ನಾವು ತಲೆಬಾಗುತ್ತೇವೆ ಎಂದು ತಿಳಿಸಿದರು.
ನಿನ್ನೆ ನಡೆದ ಮೈಸೂರು ಅಭಿವೃದ್ಧಿ ಕುರಿತು ಸಭೆಯಲ್ಲಿ ಮಾತನಾಡಿದ ಸಿಎಂ, ಶಿಥಿಲ ವ್ಯವಸ್ಥೆಯಲ್ಲಿರುವ ದೇವರಾಜ ಮಾರುಕಟ್ಟೆಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.