ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೂ ವಸ್ತ್ರ ಸಂಹಿತೆ ಜಾರಿ ಮಾಡಿ ಎಂದು ಚಾಮುಂಡೇಶ್ವರಿ ಭಕ್ತವೃಂದದಿಂದ ಜಾಗೃತಿ ಮೂಡಿಸಲಾಯಿತು.
ತುಂಡು ತುಂಡು ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಬರುತ್ತಿದ್ದಾರೆ. ಹೀಗಾಗಿ ಚಾಮುಂಡಿಬೆಟ್ಟಕ್ಕೆ ವಸ್ತ್ರ ಸಂಹಿತೆ ಜಾರಿ ಮಾಡಿ ಎಂದು ಚಾಮುಂಡೇಶ್ವರಿ ಭಕ್ತವೃಂದವು ಭಕ್ತರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಲಾಯಿತು.
ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಚಾಮುಂಡಿ ಬೆಟ್ಟ ಸೇರಿದಂತೆ ಸರ್ಕಾರದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರುವಂತೆ ಆಗ್ರಹಿಸಿದರು. ಸಾಂಸ್ಕೃತಿಕ ರಾಜಧಾನಿ ಮೈಸೂರು ಎಂದು ಹೆಸರು ಬರಲು ಮೈಸೂರಿಗರ ಸಂಸ್ಕಾರ ಹಾಗೂ ಸಂಸ್ಕೃತಿಯೇ ಕಾರಣ. ಪ್ರಾಚೀನವಾದ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ಆಷಾಢ ಮಾಸದ ಅಂಗವಾಗಿ ಬರುವವರು ನಮ್ಮ ಸಾಂಸ್ಕೃತಿಕ ಉಡುಪನ್ನು ಧರಿಸಿ ಬರಬೇಕು.
ಸರ್ಕಾರ ವಸ್ತ್ರ ನೀತಿ ಸಂಹಿತೆ ತರದಿದ್ದರೂ ಪರವಾಗಿಲ್ಲ. ನಮ್ಮ ಸಂಸ್ಕೃತಿಯನ್ನ ಪಾಲಿಸುವುದು ನಮ್ಮ ಕರ್ತವ್ಯ. ತಿರುಪತಿ ವೆಂಕಟೇಶ್ವರ ಸನ್ನಿಧಿ, ಕೇರಳದ ಶಿವನ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಕೋಟ್ಯಾಂತರ ಭಕ್ತರು ವಸ್ತ್ರ ಸಂಹಿತೆ ಪಾಲಿಸುತ್ತಿದ್ದಾರೆ. ನಮ್ಮ ಮೈಸೂರಿನ ಸಾಂಸ್ಕೃತಿಕತೆ ಪಾರಂಪರಿಕತೆಯನ್ನು ಉಳಿಸಿ ಪಾಲಿಸುವಲ್ಲಿ ಯುವ ಪೀಳಿಗೆ ಮುಂದಾಗಲಿ ಎಂದು ಮನವಿ ಮಾಡಿದರು.
ಚಾಮುಂಡೇಶ್ವರಿ ಭಕ್ತ ವೃಂದದ ಸಂಚಾಲಕ ಆನಂದ್ ನೇತೃತ್ವದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಹೇಶ್, ಶೃತಿ, ಶ್ವೇತಾ, ಕಿರಣ್, ಬಸವರಾಜು, ಮಣಿ, ಸೌಮ್ಯ. ಚಂದ್ರು, ಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.





