Mysore
22
overcast clouds

Social Media

ಭಾನುವಾರ, 02 ಆಗಸ್ಟ್ 2026
Light
Dark

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಆಯ್ಕೆ: ಸಚಿವ ಪರಮೇಶ್ವರ್‌ ಹೇಳಿದ್ದಿಷ್ಟು.!

g parmeshwar

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ ಆಯ್ಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು, ಒಂದು ಸಮುದಾಯವನ್ನು ಬಿಟ್ಟು ದಸರಾ ಮಾಡಲು ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಲೇಖಕಿ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ವಿರೋಧ ವ್ಯಕ್ತವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್‌ ಅವರು, ಈ ಹಿಂದೆ ನಿಸ್ಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದಾರೆ. ಮಿರ್ಜಾ ಇಸ್ಮಾಯಿಲ್ ಮೈಸೂರಿನಲ್ಲಿ ದಿವಾನರಾಗಿದ್ದರು. ದಸರಾ ಉದ್ಘಾಟನೆ ಬಗ್ಗೆ ವಿರೋಧ ಮಾಡೋದು ಸರಿಯಿಲ್ಲ. ಇದು ಧಾರ್ಮಿಕ ವಿಚಾರ ಅಲ್ಲ. ಇದು ನಾಡಹಬ್ಬ ದಸರಾ ಮಹೋತ್ಸವ. ಆದ್ದರಿಂದ ಒಂದು ಸಮುದಾಯವನ್ನು ಬಿಟ್ಟು ದಸರಾ ಮಾಡಲು ಆಗುತ್ತಾ? ಎಂದು ಬಾನು ಮುಷ್ತಾಕ್ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನು ಗೃಹ ಇಲಾಖೆಯಲ್ಲಿ ಲಂಚಾವತಾರ ಎಂಬ ಮಾಜಿ ಸಚಿವ ಸಾ.ರಾ.ಮಹೇಶ್ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾ.ರಾ.ಮಹೇಶ್ ಈ ಹಿಂದೆ ಮಂತ್ರಿ ಆಗಿದ್ದವರು. ಜವಾಬ್ದಾರಿಯುತ ಮುಖಂಡರು. ಯಾರು ಹಣ ಪಡೆದ್ರು, ಯಾರು ಕೊಟ್ರು?. ಈ ಬಗ್ಗೆ ದೂರು ಕೊಟ್ಟರೆ ತನಿಖೆ ಮಾಡಿಸುತ್ತೇವೆ. ಲಂಚ ಕೊಡೋದು ಗೊತ್ತಿದ್ರೆ ರೈಟಿಂಗ್ ಅಲ್ಲಿ ದೂರು ಕೊಡಲಿ ಎಂದು ಹೇಳಿದರು.

ಇನ್ನು ಸದನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಆರ್‌ಎಸ್‌ಎಸ್‌ ಗೀತೆ ಹಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆ ಬಗ್ಗೆ ನಾನು ಉತ್ತರ ಕೊಡಲ್ಲ. ನನ್ನನ್ನು ಕೇಳಬೇಡಿ ಎಂದು ಜಾರಿಕೊಂಡರು.

Tags:
error: Content is protected !!