ಮಧ್ಯಮ ವರ್ಗದ ಯುವಕರ ಕುರಿತಾದ ಹಲವು ಚಿತ್ರಗಳು ಇದುವರೆಗೂ ಕನ್ನಡದಲ್ಲಿ ಮೂಡಿ ಬಂದಿವೆ. ಈಗ ಆ ಸಾಲಿಗೆ ‘ವಿಕ್ಕಿ’ ಎಂಬ ಹೊಸ ಚಿತ್ರ ಸಹ ಸೇರಿದೆ. ಅದೇ ‘ವಿಕ್ಕಿ’. ದೀಪಕ್ ಎಸ್. ಅವಂದಕರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಕೆಲಸಗಳು ಸಂಪೂರ್ಣವಾಗಿದೆ, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ. ನಟ ನವೀನ್ ಶಂಕರ್ ಮತ್ತು ತರುಣ್ ಸುಧೀರ್ ತಾಯಿ ಮಾಲತಿ ಸುಧೀರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಈ ಚಿತ್ರವನ್ನು ಕೇಸರಿನಂದನ ಸಿನಿ ಕ್ರಿಯೇಶನ್ಸ್ ಅಡಿ ನವನೀತ ಲಕ್ಷ್ಮಿ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು ‘ಚಿತ್ರಲಹರಿ’ ಎಂಬ ಚಿತ್ರ ನಿರ್ಮಿಸಿದ್ದರಂತೆ. ಈಗ ಸಂಸ್ಥೆಯ ಎರಡನೇ ಚಿತ್ರವಾಗಿ ‘ವಿಕ್ಕಿ’ ನಿರ್ಮಿಸಿದ್ದಾರೆ.
ದಾವಣಗೆರೆ ಮೂಲದವರಾದ ನಿರ್ದೇಶಕ ದೀಪಕ್ ಮಾತನಾಡುತ್ತಾ, ‘ನಿರ್ಮಾಪಕರ ಹಿಂದಿನ ಚಿತ್ರದಲ್ಲಿ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಅವಕಾಶ ನೀಡಿದ್ದಾರೆ. ಇದೊಂದು ಕಾಮಿಡಿ ಚಿತ್ರ. ಮಧ್ಯಮ ವರ್ಗದ ಹುಡುಗನೊಬ್ಬ ದೊಡ್ಡ ಕನಸು ಕಂಡು, ಅದನ್ನು ನನಸು ಮಾಡಿಕೊಳ್ಳಲು ಹೋದಾಗ ಏನೆಲ್ಲ ಆಗಬಹುದು ಎಂಬುದನ್ನು ಹಾಸ್ಯಮಿಶ್ರಿತವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು.
ಈ ಚಿತ್ರದ ಮೂಲಕ ಜನಪ್ರಿಯ ಹಾಸ್ಯ ನಟ ರಾಜು ತಾಳಿಕೋಟೆ ಅವರ ಮಗ ಭರತ್ ತಾಳಿಕೋಟೆ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ಇದಕ್ಕೂ ಮೊದಲು ನಾಲ್ಕೈದು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ‘ಈ ಚಿತ್ರದ ಮೂಲಕ ಮೊದಲ ಬಾರಿ ಹೀರೋ ಆಗಿದ್ದೇನೆ. ಮಧ್ಯಮ ಕುಟುಂಬದ ಹುಡುಗನ ಪಾತ್ರ ನನ್ನದು’ ಎಂದರು.
‘ವಿಕ್ಕಿ’ ಚಿತ್ರದಲ್ಲಿ ಭರತ್ ಜೊತೆಗೆ ವಿಂಧ್ಯ ಹೆಗಡೆ, ವರುಣ್ ದೇವಯ್ಯ, ರಾಜು ತಾಳಿಕೋಟೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕಾಗಿ ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ 35 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರವನ್ನು ವೀಕ್ಷಿಸಿರರುವ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರವು ಮೇ ಎರಡನೇ ವಾರ ಬಿಡುಗಡೆ ಆಗಲಿದೆ.





