ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಥಗ್ಸ್ ಆಫ್ ರಾಮಘಡ’ ಹೆಚ್ಚು ಸುದ್ದಿ ಮಾಡದಿದ್ದರೂ, ಆ ಚಿತ್ರದಲ್ಲಿ ನಟಿಸಿದ್ದ ಚಂದನ್ ರಾಜ್, ತಮ್ಮ ಪ್ರತಿಭೆಯಿಂದ ಗಮನಸೆಳೆದರು. ಈಗ ಅವರು ಇನ್ನೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಈ ಚಿತ್ರವು ಜೂನ್.27ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಚಂದನ್ ರಾಜ್ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರದ ಹೆಸರು ‘ರಾಜರತ್ನಾಕರ’. ಚೌಮುದ ಬ್ಯಾನರ್ ಅಡಿ ಜಯರಾಮ ಸಿ. ಮಾಲೂರು ಈ ಚಿತ್ರವನ್ನು ನಿರ್ಮಿಸಿದ್ದು, ವೀರೇಶ್ ಬೊಮ್ಮಸಾಗರ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಮತ್ತು ಸಿದ್ದು ಕಂಚನಹಳ್ಳಿ ಛಾಯಾಗ್ರಹಣವಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಉಡಾಳನ ಕಥೆಯಾಗಿದ್ದು, ದುಡ್ಡು ಮಾಡುವುದಕ್ಕೆ ಆತ ಏನೆಲ್ಲಾ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆಯಂತೆ. ಈ ಚಿತ್ರದ ಕುರಿತು ಮಾತನಾಡುವ ವೀರೇಶ್ ಬೊಮ್ಮ ಸಾಗರ, ‘ಇದು ನನ್ನ ಮೊದಲ ಸಿನಿಮಾ. ಎಲ್ಲರ ಮನೆಯಲ್ಲೂ ಇಂಥವನೊಬ್ಬ ಇರುತ್ತಾನೆ. ಅವನಿಂದ ಕುಟುಂಬದವರು ಹೇಗೆ ಇಕ್ಕಟ್ಟಿಗೆ ಸಿಲುಕುತ್ತಾರೆ ಮತ್ತು ಅವನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ’ ಎಂದರು.
ಇದನ್ನೂ ಓದಿ: ಎರಡು ಪಾತ್ರಗಳ ಸುತ್ತ ಸುತ್ತುವ ʼಎಲ್ಟು ಮುತ್ತಾʼ ಬಿಡುಗಡೆಗೆ ಸಿದ್ಧ
ಈ ರೀತಿಯ ಕಥೆ ಸಿಕ್ಕಿದ್ದು ಅದೃಷ್ಟ ಎನ್ನುವ ಚಂದನ್ ರಾಜ್, ನಮ್ಮ ನೇಟಿವಿಟಿ ಕಥೆಗಳನ್ನ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ನಾನು ಬೆಂಗಳೂರಿನ ಹುಟ್ಟಿ ಬೆಳೆದ ಕಾರಣ ಇಲ್ಲಿನ ಕಥೆಯನ್ನೇ ಮಾಡಬೇಕು ಎಂದುಕೊಂಡಿದ್ದೆ’ ಎಂದಿದ್ದಾರೆ.
ಚಿತ್ರದಲ್ಲಿ ಚಂದನ್ ರಾಜ್ ತಾಯಿ ಪತ್ರ ಮಾಡಿರುವ ಯಮುನಾ ಶ್ರೀನಿಧಿ ಮಾತನಾಡಿ, ‘ವೀರೇಶ್ ಅವರು ನನಗೆ ಕಥೆ ವಿವರಿಸಿದ ರೀತಿಗೆ ನಾನು ಸಿನಿಮಾ ಒಪ್ಪಿಕೊಂಡೆ. ನಾನು ಸಾಕಷ್ಟು ಚಿತ್ರಗಳಲ್ಲಿ ತಾಯಿ ಪಾತ್ರ ಮಾಡಿದ್ದರೂ ಕೂಡ ಇದು ವಿಭಿನ್ನವಾಗಿದೆ. ತೆರೆಯ ಮೇಲೆ ನೋಡಿದಾಗ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ’ ಎಂದರು. ಎಂದರು.
‘ರಾಜರತ್ನಾಕರ’ ಚಿತ್ರದಲ್ಲಿ ಚೇತನ್ ದುರ್ಗಾ, ನಾಗರಾಜ ರಾವ್, ಸಿದ್ದು, ಡಿಂಗ್ರಿ ನರೇಶ್ ಮುಂತಾದವರು ನಟಿಸಿದ್ದಾರೆ. ಚಿತ್ರದ ನಾಯಕಿಯಾಗಿ ಅಪ್ಸರಾ ನಟಿಸಿದ್ದಾರೆ. ಈ ಚಿತ್ರದ ಬಿಡುಗಡೆಗೂ ಮೊದಲೇ ಅವರು ಇನ್ನಿಲ್ಲವಾಗಿದ್ದಾರೆ. ಇಡೀ ತಂಡ ಅಪ್ಸರಾ ಅವರಿಗೆ ಕಂಬನಿ ಮಿಡಿದಿದೆ.





