ಸುದೀಪ್ ಇದುವರೆಗೂ ಹಲವು ಚಿತ್ರಗಳು ಮತ್ತು ಟ್ರೇಲರ್ಗಳಿಗೆ ಧ್ವನಿ ನೀಡಿದ್ದಾರೆ. ಕಥೆಯನ್ನು ತಮ್ಮದೇ ರೀತಿಯಲ್ಲಿ ನಿರೂಪಿಸಿದ್ದಾರೆ. ಈಗ ಆ ಸಾಲಿಗೆ ‘ಮಾರ್ನಮಿ’ ಸಹ ಸೇರಿದೆ. ನವೆಂಬರ್ 28ರಂದು ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಈ ಟ್ರೇಲರ್ಗೆ ಸುದೀಪ್ ಧ್ವನಿ ನೀಡಿರುವುದು ವಿಶೇಷ. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿರುವ ಸುದೀಪ್, ‘ಟ್ರೇಲರ್ ಬಹಳ ಆಸಕ್ತಿಕರವಾಗಿದೆ. ಈ ತರಹದ ಕಥೆಗಳನ್ನು ಪರದೆ ಮೇಲೆ ತರುವುದು ದೊಡ್ಡ ಸವಾಲಿನ ವಿಷಯ. ಆ ವಿಷಯದಲ್ಲಿ ಈ ತಂಡ ಗೆದ್ದಿದೆ, ನಿರ್ದೇಶಕರು ತುಂಬಾ ಕಷ್ಟಪಟ್ಟಿದ್ದಾರೆ ಹಾಕಿದ್ದಾರೆ.
ಇದನ್ನು ಓದಿ: ‘ಮಾರ್ಕ್’ ಚಿತ್ರೀಕರಣ ಮುಕ್ತಾಯ: ಡಿಸೆಂಬರ್.25ಕ್ಕೆ ಚಿತ್ರಮಂದಿರಗಳಿಗೆ ಎಂಟ್ರಿ
ಅವರದ್ದೇ ಊರಿನ ಕಥೆಯನ್ನು ಪರದೆ ಮೇಲೆ ತರುವುದು ಸುಲಭವಲ್ಲ. ಆದರೆ, ನಿರ್ದೇಶಕರು ಅದನ್ನು ಸಾಧಿಸಿದ್ದಾರೆ. ಚರಣ್ ರಾಜ್ ಸಂಗೀತ ಚೆನ್ನಾಗಿದೆ. ಈ ಚಿತ್ರ ದೊಡ್ಡ ರೀತಿ ಯಶಸ್ಸು ಕಾಣಲಿದೆ’ ಎಂದು ಭವಿಷ್ಯ ನುಡಿದರು. ಈ ಚಿತ್ರದ ಮೂಲಕ ‘ಗಿಣಿರಾಮ’ ಖ್ಯಾತಿ ರಿತ್ವಿಕ್ ಮಠದ್ ಹೀರೋ ಆಗುತ್ತಿದ್ದಾರೆ. ಅವರ ಜೀವನದಲ್ಲಿ ಒಬ್ಬ ಸ್ಟಾರ್ ನಟನನ್ನು ಹತ್ತಿರದಿಂದ ನೋಡಿದ್ದೆಂದರೆ ಅದು ಸುದೀಪ್ ಅಂತೆ.
‘ಸಿನಿಮಾ ಅಂದರೆ ಸುದೀಪ್ ಬಹಳ ಪ್ರೋತ್ಸಾಹ ಕೊಡುತ್ತಾರೆ. ಕರಾವಳಿ ಭಾಗದಲ್ಲಿ ನಡೆದ ಕಥೆಯನ್ನು ‘ಮಾರ್ನಮಿ’ ಸಿನಿಮಾ ಮೂಲಕ ಹೇಳಲು ಹೊರಟಿದ್ದೇವೆ’ ಎಂದರು. ‘ಮಾರ್ನಮಿ’ ಚಿತ್ರದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ ಆಚಾರ್ ಜೊತೆಗೆ ಸುಮನ್ ತಲ್ವಾರ್, ಪ್ರಕಾಶ್ ತುಮಿನಾಡು, ಸೋನು ಗೌಡ , ಜ್ಯೋತೀಶ್ ಶೆಟ್ಟಿ, ರೋಚಿತ್, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರಾ ಶೆಟ್ಟಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ. ಚರಣ್ ರಾಜ್ ಸಂಗೀತ, ಶಿವಸೇನಾ ಛಾಯಾಗ್ರಹಣ,, ಸುಧೀ ಆರ್ಯನ್ ಕಥೆ ಚಿತ್ರಕ್ಕಿದ್ದು, ಗುಣಾಧ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಚಿತ್ರ ನಿರ್ಮಿಸಿದ್ದಾರೆ.





