ಲೀಡರ್ ಎಂದರೆ ಅವನು ಮುಂದೆ ಇದ್ದು, ಸಾವಿರ ಜನ ಹಿಂದಿರುವುದಲ್ಲ. ಸಾವಿರ ಜನರ ಮಧ್ಯೆ ಇರೋನೇ ಲೀಡರ್ ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ.
ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ (ಏಪ್ರಿಲ್ 27), ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕನ್ನಡ ಚಿತ್ರರಂಗದ ಸದಸ್ಯರು ಹಾಗೂ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು. ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್, ಶಿವರಾಜಕುಮಾರ್, ಧ್ರುವ ಸರ್ಜಾ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ನಾಯಕತ್ವದ ಕುರಿತು ಪ್ರಶ್ನೆ ಬಂತು. ಹಿಂದೆ ಡಾ. ರಾಜಕುಮಾರ್ ಚಿತ್ರರಂಗವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಆದರೆ, ಈಗ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತಿಗೆ ಉತ್ತರಿಸಿದ ಅವರು, ‘ಇಲ್ಲಿ ಲೀಡ್ ವಿಷಯ ಬರುವುದಿಲ್ಲ. ಎಲ್ಲರೂ ಭಾಗವಹಿಸಬೇಕು ಅಷ್ಟೇ. ನಾವು ಇದ್ದೇ ಇದ್ದೀವಿ. ಯುವಕರು ಸಹ ಬರಬೇಕು. ನಾನೊಬ್ಬ ಮುಂದೆ ಹೋಗುತ್ತೇನೆ, ಎಲ್ಲರೂ ಹಿಂದೆ ಬನ್ನಿ ಎನ್ನುವುದು ತಪ್ಪಾಗುತ್ತದೆ. ಹಿಂದೆ ಬರುವ ಕಾಲ ಹೊರಟು ಹೋಯಿತು. ಹಿಂದೆ ಬರುವುದು ಮುಖ್ಯವಲ್ಲ. ಲೀಡರ್ ಎಂದರೆ ಅವನು ಮುಂದೆ ಇದ್ದು, ಸಾವಿರ ಜನ ಹಿಂದಿರುವುದಲ್ಲ. ಸಾವಿರ ಜನರ ಮಧ್ಯೆ ಇರೋನೇ ಲೀಡರ್. ಆಗ ಪ್ರತಿಯೊಬ್ಬರೂ ಲೀಡರ್ ಆಗಿರುವ ಫೀಲ್ ಮಾಡುತ್ತಾರೆ. ಆಗ ಸಮಸ್ಯೆ ಬಗೆಹರಿಯುತ್ತದೆ’ ಎಂದರು.
ಚಿತ್ರರಂಗದ ಸದ್ಯದ ಸ್ಥಿತಿಗತಿಯ ಬಗ್ಗೆ ಮತ್ತು ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿರುವ ಅವರು, ‘ಕೆಲವು ಸಮಯ-ಸಂದರ್ಭಗಳಲ್ಲಿ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ. ಅದರಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂದು ಹೇಳುವುದು ಕಷ್ಟ. ಇಂಥ ಸಂದರ್ಭಗಳು ಬರುತ್ತವೆ, ಹೋಗುತ್ತವೆ. ಬಂದಾಗ ಅದನ್ನು ಎದುರಿಸದೇ ಬೇರೆ ದಾರಿ ಇಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಎದುರಿಸಬೇಕು. ನೀವು ಸರಿಯಾಗಿ ಯೋಚಿಸಿ, ಹೆಜ್ಜೆ ಇಡಬೇಕು. ಅವಸರಪಟ್ಟು ತಪ್ಪು ಹೆಜ್ಜೆ ಇಡಬಾರದು. ಕಲೆ ಎನ್ನುವುದು ಬರೀ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ಬೇರೆ ಭಾಷೆಗಳೂ ಇವೆ. ಅವೆಲ್ಲವನ್ನೂ ಒಗ್ಗೂಡಿಸಿಕೊಂಡು ನಾವು ಹೆಜ್ಜೆ ಇಡಬೇಕು’ ಎಂದು ಹೇಳಿದರು.





